ಜಾಗಕ್ಕೆ ಸಂಬಂಧಿಸಿ ಗಲಾಟೆ ►ಓರ್ವ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.19, ಓಡಾಡುವ ಜಾಗಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿರುವ  ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ.

ನಾಗರಾಜು(55) ಮೃತ ದುರ್ದೈವಿ. ನಾಗರಾಜು ಪತ್ನಿ ಗೌರಮ್ಮ(44), ಮಗ ನಾರಾಯಣಸ್ವಾಮಿ(27) ಗಂಭೀರವಾಗಿ ಗಾಯಗೊಂಡವರು.

ಚಲುವರಾಜು ಮತ್ತು ನಾಗರಾಜು ಮನೆ ಅಕ್ಕಪಕ್ಕದಲ್ಲಿದ್ದು, ಮನೆಯ ಸಮೀಪ ಓಡಾಡುವ ಜಾಗದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಆದರೆ ಕಳೆದ ರಾತ್ರಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿತ್ತು.

ಚಲುವರಾಜು ಪಕ್ಕದ ಮನೆಯ ನಾಗರಾಜು ಮೇಲೆ ಚೂರಿ ಮತ್ತು ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾನೆ. ನಾಗರಾಜುವನ್ನು ಕಾಪಾಡಲು ಪತ್ನಿ ಗೌರಮ್ಮ ಮತ್ತು ಮಗ ನಾರಾಯಣಸ್ವಾಮಿ ಯತ್ನಿಸಿದ್ದರು. ಆದರೆ ಅವರ ಮೇಲೂ ಚೂರಿ ಮತ್ತು ಮರದ ತುಂಡಿನಿಂದ ಚಲುವರಾಜು ಹಲ್ಲೆ ನಡೆಸಿದ್ದಾನೆ. ಇದರ ಪರಿಣಾಮ ನಾಗರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಗೌರಮ್ಮ ಮತ್ತು ಮಗ ನಾರಾಯಣಸ್ವಾಮಿ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

Also Read  ಕಡಬದ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆ

ಹಲಗೂರು ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆ ಆರೋಪಿ ಚಲುವರಾಜುನನ್ನು ಬಂಧಿಸಿದ್ದಾರೆ.

error: Content is protected !!
Scroll to Top