ಜಾನುವಾರುಗಳಲ್ಲಿ ಲಂಪಿ ಚರ್ಮ ಗಂಟು ರೋಗದ ಚಿಕಿತ್ಸೆ ಮತ್ತು ನಿಯಂತ್ರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 05. ಲಂಪಿ ಚರ್ಮ ಗಂಟು ರೋಗವು  ದನಗಳಲ್ಲಿ ಮತ್ತು ಎಮ್ಮೆಗಳಲ್ಲಿ ಕಂಡುಬರುವ ಒಂದು ವೈರಸ್ ಖಾಯಿಲೆಯಾಗಿರುತ್ತದೆ. ಈ ಖಾಯಿಲೆಯು ಸೊಳ್ಳೆಗಳು, ನೊಣಗಳು ಮತ್ತು ಉಣ್ಣೆ (ಉನುಗು)ಗಳ ಮೂಲಕ ಜಾನುವಾರುಗಳಿಗೆ ಹರಡುತ್ತದೆ.


ರಾಜ್ಯದ ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ರೋಗವು ಕಂಡು ಬಂದಿದ್ದು, ಇತ್ತೀಚೆಗೆ ಉಡುಪಿ ಜಿಲ್ಲೆಯ ಕೆಲ ಭಾಗಗಳಲ್ಲಿ ಕಾಣಿಸಿಕೊಂಡಿದೆ.  ಆದರೆ ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಜಾನುವಾರುಗಳಲ್ಲಿ ರೋಗದ ಲಕ್ಷಣಗಳು ಕಂಡು ಬಂದಿರುವುದಿಲ್ಲ. ಒಂದು ವೇಳೆ ಜಾನುವಾರುಗಳಲ್ಲಿ ಲಂಪಿ ಚರ್ಮಗಂಟು ರೋಗದ ಲಕ್ಷಣಗಳು ಕಂಡು ಬಂದಲ್ಲಿ ರೈತರು ಯಾವುದೇ ಭಯ ಪಡದೆ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯ ಪಶುವೈದ್ಯರನ್ನು ಅಥವಾ ಸಿಬ್ಬಂದಿಯವರನ್ನು ಸಂಪರ್ಕಿಸಬೇಕು.
ರೋಗದ ಲಕ್ಷಣಗಳು ಇಂತಿವೆ- ರೋಗ ಬಂದ ಜಾನುವಾರುವಿನಲ್ಲಿ ಜ್ವರ, ಮೈಮೇಲೆ ಗುಳ್ಳೆ, ಮುಂಗಾಲು ಬಾವು, ಎದೆ ಬಾವು, ಕೆಚ್ಚಲಲ್ಲಿ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಜಾನುವಾರುಗಳು ಮಂಕಾಗಿ ಮೇವು ತಿನ್ನುವುದನ್ನು ಕಡಿಮೆ ಮಾಡುತ್ತದೆ. ಬಹು ಮುಖ್ಯವಾಗಿ ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ.

Also Read  ಅ. 14ರಿಂದ ಅ.18ರ ಮಧ್ಯರಾತ್ರಿಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

ರೋಗದ ನಿಯಂತ್ರಣ ಇಂತಿವೆ- ಚರ್ಮಗಂಟು ರೋಗ ಕಂಡುಬಂದ ಜಾನುವಾರುಗಳನ್ನು ಇತರೆ ಜಾನುವಾರುಗಳ ಗುಂಪಿನಿಂದ ಪ್ರತ್ಯೇಕಿಸುವುದರಿಂದ ಇತರೆ ಜಾನುವಾರುಗಳಿಗೆ ರೋಗ ಹರಡದಂತೆ ತಡೆಗಟ್ಟಬಹುದು.  ಯಾವುದೇ ಕಾರಣಕ್ಕೂ ರೋಗ ಬಂದ ಜಾನುವಾರುಗಳನ್ನು ಕೃಷಿ ಕೆಲಸಕ್ಕೆ ಬಳಸದೆ 8 ರಿಂದ 10 ದಿನಗಳ ಕಾಲ ವಿಶ್ರಾಂತಿ ನೀಡಿ ಚಿಕಿತ್ಸೆಯನ್ನು ನೀಡಬೇಕು. ಕೊಟ್ಟಿಗೆಯಲ್ಲಿ ಶುಚಿತ್ವವನ್ನು ಕಾಪಾಡುವುದು ಅತೀ ಮುಖ್ಯವಾಗಿರುತ್ತದೆ.  ಪ್ರತಿ ದಿನ ಕೊಟ್ಟಿಗೆಯನ್ನು ಶುಚಿಗೊಳಿಸುತ್ತಿರಬೇಕು. ಕೊಟ್ಟಿಗೆಯ ಸುತ್ತ ಮುತ್ತ ನೊಣ, ಸೊಳ್ಳೆಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಪೌಷ್ಠಿಕ ಆಹಾರ, ನೀರು ನೀಡಬೇಕು. ಜಾನುವಾರುಗಳ ಮೇಲ್ಮೈಗೆ ನೀಲಗಿರಿ ಎಣ್ಣೆ ಅಥವಾ ಬೇವಿನ ಎಣ್ಣೆ ಅಥವಾ ಸೊಳ್ಳೆ, ನೊಣ ನಿವಾರಕ ಮುಲಾಮು ಹಚ್ಚಬೇಕು. ಸೂಕ್ತ ಸಮಯದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಹಾಗೂ ಅಗತ್ಯವಿರುವ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವುದರ ಮೂಲಕ ರೋಗವನ್ನು ನಿಯಂತ್ರಿಸಬಹುದಾಗಿದೆ.

Also Read  ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟ ಕಡ್ಡಾಯವಾಗಿ ಹಾರಬೇಕು- ಡಿಕೆಶಿ

error: Content is protected !!
Scroll to Top