ಕೊರೊನಾ ಎಫೆಕ್ಟ್: ಸಂಕಷ್ಟದಲ್ಲಿ ಬಿಸಿಯೂಟ ನೌಕರರು! ಉದ್ಯೋಗ ಇಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಹಿಳೆಯರು

(ನ್ಯೂಸ್‌ ಕಡಬ) newskadaba.com ಸುಬ್ರಹ್ಮಣ್ಯ, ಆ.20. ಜಗತ್ತಿನಾದ್ಯಂತ ಕೊರೋನಾ ಅಬ್ಬರದಿಂದಾಗಿ ಆರ್ಥಿಕವಾಗಿ ಎಲ್ಲರೂ ಕುಗ್ಗಿ ಹೋಗಿದ್ದಾರೆ. ಸರಕಾರ ಕೆಲವರಿಗೆ ಪರಿಹಾರ ನೀಡಿದರೆ, ಕೆಲವರಿಗೆ ಇನ್ನೂ ಸಿಕ್ಕಿಲ್ಲ. ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಮದ್ಯಾಹ್ನ ಅನ್ನ ಹಾಕುವ ಕೈಗಳು ಪರಿಹಾರದ ನಿರೀಕ್ಷೆಯಲ್ಲಿದ್ದು, ಇದೀಗ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೋವಿಡ್ 19 ಕೊರೊನಾ ಸೋಂಕಿನಿಂದಾಗಿ ಇಡೀ ದೇಶವನ್ನೇ ಸುಮಾರು ಎರಡೂವರೆ ತಿಂಗಳ ಕಾಲ ಲಾಕ್‍ಡೌನ್ ಮಾಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ವರ್ಗದ ಜನತೆ ತೀರಾ ಸಂಕಷ್ಟವನ್ನು ಅನುಭವಿಸಿದ್ದರು. ಸರಕಾರ ಕೆಲ ವರ್ಗಕ್ಕೆ ಪರಿಹಾರ ನೀಡಿದರೆ, ಕೆಲ ಕಾರ್ಮಿಕ ವರ್ಗಕ್ಕೂ ಪರಿಹಾರ ಬಿಡುಗಡೆ ಮಾಡಿತ್ತು.

ಬಿಸಿಯೂಟ ನೌಕರರಿಗೆ ದಕ್ಕದ ಪರಿಹಾರ:
ಶೈಕ್ಷಣಿಕ ಅವಧಿ ಕೊನೆಯಲ್ಲಿ ಲಾಕ್‍ಡೌನ್ ಮಾಡಲಾಗಿದ್ದು, ಇದೀಗ ಶೈಕ್ಷಣಿಕ ವರ್ಷಾರಂಭವಾಗಿದ್ದರೂ ಶಾಲೆಗಳನ್ನು ತೆರೆಯದ ಪರಿಣಾಮ. ಬಿಸಿಯೂಟ ನೌಕರರು ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ. ಸರಕಾರ ಇವರಿಗೆ ಯಾವುದೇ ಪರಿಹಾರವನ್ನು ಅಥವಾ ಪರ್ಯಾಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ದೂರು ವ್ಯಕ್ತಗೊಂಡಿದೆ.

ಸಂಕಷ್ಟದಲ್ಲಿ ಮಹಿಳೆಯರು:
ಅಕ್ಷರ ದಾಸೋಹ ಯೋಜನೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸುತ್ತಿರುವವರು ಮಹಿಳೆಯರೇ ಆಗಿದ್ದಾರೆ. ಈ ಯೋಜನೆ ಅದೆಷ್ಟೋ ಮಹಿಳೆಯರಿಗೆ ಉದ್ಯೋಗವನ್ನು ನೀಡಿತ್ತು. ಆದರೆ ಇಂದು ಕೊರೊನಾದಿಂದಾಗಿ ಶಾಲೆಗಳು ಬಂದ್ ಆದ ಪರಿಣಾಮ ಬಿಸಿಯೂಟ ಸಿಬಂದಿಗಳು ತೀರಾ ಸಂಕಷ್ಟಕರ ಜೀವನವನ್ನು ನಡೆಸುತ್ತಿದ್ದಾರೆ. ಅವರಿಗೆ ಯಾವುದೇ ಪರಿಹಾರವನ್ನು ಸರಕಾರ ಘೋಷಣೆ ಈವರೆಗೆ ಮಾಡಿಲ್ಲ.

ಪರಿಹಾರದ ನಿರೀಕ್ಷೆಯಲ್ಲಿ:
ಅಕ್ಷರ ದಾಸೋಹದ ಸಿಬ್ಬಂದಿಗಳು ಸರಕಾರದ ಸಂಬಳ ಪಡೆಯುತ್ತಿದ್ದರೂ ಇನ್ನೂ ಅವರ ಹಲವು ಬೇಡಿಕೆ ಈಡೇರಿಲ್ಲ. ಕನಿಷ್ಠ ವೇತನ, ಪೆನ್ಸನ್ ಸೌಲಭ್ಯ, ಉದ್ಯೋಗ ಖಾಯಂ, ರಜಾ ಅವಧಿ ವೇತನ ಸೇರಿದಂತೆ ಹಲವಾರು ಬೇಡಿಕೆಗಳ ಪ್ರತಿಭಟನೆ, ಆಗ್ರಹಗಳು, ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೊರೊನಾ ಪರಿಣಾಮ ಚಾಲಕರು, ಕಾರ್ಮಿಕರಿಗೆ ಪರಿಹಾರ ನೀಡಲಾಗಿದ್ದು, ಬಿಸಿಯೂಟ ನೌಕರರಿಗೆ ಇಂದಲ್ಲ, ನಾಳೆ ಪರಿಹಾರ ಕೊಡುತ್ತಾರೆಂದು ಮಹಿಳೆಯರು ನಿರೀಕ್ಷೆಯನ್ನಿಟ್ಟುಕೊಂಡು ಕಾಯುತ್ತಿದ್ದಾರೆ.

ಆಗ್ರಹ:
ಬಿಸಿಯೂಟ ನೌಕರರಿಗೆ ಪ್ರಸ್ತುತ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇವರನ್ನು ಖಾಯಂ ನೇಮಕ ಮಾಡದೇ ಇರುವುದೇ ಇದಕ್ಕೆ ಕಾರಣ. ಹಲವಾರು ವರ್ಷಗಳಿಂದ ದುಡಿಯುತ್ತಿದ್ದು, ಖಾಯಂಗೆ ಆಗ್ರಹಸಿದರೂ ಪ್ರಯೋಜನವಾಗಿಲ್ಲ. ಬೆಳಗ್ಗಿನಿಂದ ಸಾಯಂಕಾಲದವರೆಗೆ ಕೆಲಸ ನಿರ್ವಹಿಸಿದರೂ ದಿನಕ್ಕೆ ಇಂತಿಷ್ಟು ವೇತನ ನೀಡಲಾಗುತ್ತಿದೆ ಎನ್ನಲಾಗಿದೆ. ಬಿಸಿಯೂಟ ನೌಕರರ ಅತ್ಯಗತ್ಯ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಆಗ್ರಹಗಳು ಗ್ರಾಮಮಟ್ಟದಿಂದಲೇ ಇದೀಗ ಕೇಳಿಬರುತ್ತಿದೆ. ಬಿಸಿಯೂಟ ನೌಕರರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ನೀಡುವ ಬಗ್ಗೆ ಸರಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಬೇಕಾಗಿದ್ದು, ಈ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿದುಬಂದಿದ್ದು ಇದು ಶೀಘ್ರವಾಗಿ ನಡೆಯಬೇಕಾಗಿದೆ.

ಕೇಂದ್ರ, ರಾಜ್ಯ ಪಾಲು:
ಮದ್ಯಾಹ್ನದ ಬಿಸಿಯೂಟ ನೌಕರರಿಗೆ ನೀಡುವ ವೇತನದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲಿದೆ. ಬಿಸಿಯೂಟ ನೌಕರರಲ್ಲಿ ಮುಖ್ಯವಾಗಿ ಅಡುಗೆಯವರಿಗೆ ರೂ.2700 ಹಾಗೂ ಸಹಾಯಕರಿಗೆ ರೂ.2600 ಮಾಸಿಕ ವೇತನ ಸದ್ಯ ಇದೆ. ರಾಜ್ಯದಲ್ಲಿ ಸುಮಾರು 1,26,000 ಮಂದಿ ಬಿಸಿಯೂಟ ನೌಕರರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನೌಕರರ ವೇತವನ್ನು ಹೆಚ್ಚಿಸಬೇಕೆಂಬ ಆಗ್ರಹವು ಅನೇಕ ಸಮಯಗಳಿಂದ ಕೇಳಿಬರುತ್ತಿದೆ.

error: Content is protected !!

Join the Group

Join WhatsApp Group