ಲಾಕ್ ಡೌನ್ ಹಿನ್ನೆಲೆ – 5 ತಿಂಗಳಿನಿಂದ ಸ್ತಬ್ಧವಾದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ

ಮಂಗಳೂರು: ಶತಮಾನದ ಇತಿಹಾಸವಿರುವ, ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣವು ಕೋವಿಡ್ ಕಾರಣದಿಂದಾಗಿ ಕಳೆದ 5 ತಿಂಗಳಿನಿಂದ  ರೈಲುಗಳ ಓಡಾಟವಿಲ್ಲದೆ ಸ್ತಬ್ಧವಾಗಿದೆ. ಇದೀಗ ಬೆಂಗಳೂರು- ಮಂಗಳೂರು ನಡುವೆ ಸ್ಥಗಿತಗೊಂಡಿರುವ ರೈಲುಗಳ ಪೈಕಿ ಕನಿಷ್ಠ ಒಂದನ್ನಾದರೂ ಪುನರಾರಂಭಿಸುವಂತೆ ಪ್ರಯಾಣಿಕರಿಂದ ಆಗ್ರಹ ಕೇಳಿಬರುತ್ತಿದೆ.

 

ಕೊರೋನಾ ಲಾಕ್‌ಡೌನ್‌ ಗಿಂತ ಮೊದಲು ಮಂಗಳೂರು ಸೆಂಟ್ರಲ್‌ನಿಂದ ಪ್ರತೀದಿನ 27 ರೈಲುಗಳು ದೇಶದ ವಿವಿಧ ಭಾಗಗಳಿಗೆ ಸಂಚರಿಸುತ್ತಿದ್ದವು. ದಿನವೊಂದಕ್ಕೆ ಸುಮಾರು 30,000 ಪ್ರಯಾಣಿಕರ ಆಗಮನ ಹಾಗೂ ನಿರ್ಗಮನವಿತ್ತು. ಸರಕು ಸಾಗಾಟ ರೈಲುಗಳು, ಹಾಗೂ ರೈಲ್ವೇ ಅಂಚೆ ಸೇವೆಗಳು ಕೋಡಾ ಚಾಲನೆಯಲ್ಲಿದ್ದವು. ಮಾರ್ಚ್‌ 21ರಂದು ಲಾಕ್‌ಡೌನ್‌ ಘೋಷಣೆಯಾದ ಬಳಿಕ ಇವೆಲ್ಲವೂ ಸ್ಥಗಿತಗೊಂಡಿವೆ. ಇನ್ನು, ಮಂಗಳೂರು ಜಂಕ್ಷನ್‌ನಿಂದ ಎರ್ನಾಕುಳಂ ಮೂಲಕ ಹೊಸದಿಲ್ಲಿಗೆ ತೆರಳುವ ಮಂಗಳಾ ಎಕ್ಸ್‌ ಪ್ರೆಸ್ ಹಾಗೂ ತಿರುವನಂತಪುರದಿಂದ ಮುಂಬಯಿಗೆ ಹೋಗುವ ನೇತ್ರಾವತಿ ಎಕ್ಸ್‌ ಪ್ರೆಸ್ ಮಾತ್ರ ಸದ್ಯಕ್ಕೆ ಸಂಚರಿಸುತ್ತಿವೆ. ಕೆಲವು ಗೂಡ್ಸ್‌ ರೈಲುಗಳು ಕೂಡಾ ಈಗ ಮಂಗಳೂರು ನಿಲ್ದಾಣದ ಮೂಲಕ ಹಾದು ಹೋಗುತ್ತಿವೆ. ಲಾಕ್‌ಡೌನ್‌ ಪೂರ್ವದಲ್ಲಿ ಮಂಗಳೂರು- ಬೆಂಗಳೂರು ನಡುವೆ 4 ರೈಲುಗಳ ಸಂಚಾರ ವಿತ್ತು. ಇದೀಗ ಲಾಕ್‌ಡೌನ್‌ ತೆರವಾಗಿ ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಯೂ ರಾಜ್ಯದಲ್ಲಿ ಬೆಂಗಳೂರು-ಬೆಳಗಾವಿ, ಬೆಂಗಳೂರು-ಮೈಸೂರು ಭಾಗದಲ್ಲಿ ರೈಲುಗಳ ಸಂಚಾರ ಆರಂಭಿಸಿದೆ. ಇತ್ತ ಚಾರ್ಮಾಡಿ ಹಾಗೂ ಸಂಪಾಜೆ ಘಾಟ್ ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿರುವುದರಿಂದ ಬಸ್‌ಗಳ ಸಂಚಾರ ಕೂಡಾ ವ್ಯತ್ಯಯವಾಗಿವೆ. ಬೆಂಗಳೂರು-ಮಂಗಳೂರಿಗೆ ಪ್ರಮುಖ ಸಂಪರ್ಕ ಸೇತು ಆಗಿರುವ ಶಿರಾಡಿ ಘಾಟಿ ರಸ್ತೆಯಲ್ಲೂ ಮಳೆಗಾಲದಲ್ಲಿ ಅಲ್ಲಲ್ಲಿ ಭೂಕುಸಿತಗಳಾಗುತ್ತವೆ. ಹೀಗಾಗಿ ಮಂಗಳೂರು-ಬೆಂಗಳೂರು ಮಧ್ಯೆ ಕನಿಷ್ಠ ಒಂದು ರೈಲು ಸಂಚಾರವನ್ನು ಆರಂಭಿಸಬೇಕೆಂದು ಕಳೆದ ಎರಡು ತಿಂಗಳುಗಳಿಂದ ಪ್ರಯಾಣಿಕರು, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘದ ಸಲಹೆಗಾರ ಅನಿಲ್‌ ಹೆಗ್ಡೆ, ರೈಲು ಬಳಕೆದಾರರ ಸಂಘಟನೆಗಳು ರೈಲ್ವೇ ಇಲಾಖೆಯನ್ನು ಆಗ್ರಹಿಸಿದ್ದಾರೆ.

.

error: Content is protected !!

Join the Group

Join WhatsApp Group