12 ಕಿ.ಮೀ. ದೂರ ಓಡಿ, ಕೊಲೆ ಆರೋಪಿ ಪತ್ತೆ ಮಾಡಿದ ಪೊಲೀಸ್ ಸ್ನೀಫರ್ ಡಾಗ್!

(ನ್ಯೂಸ್ ಕಡಬ) newskadaba.com ದಾವಣಗೆರೆ, ಜು.21:  ಪೊಲೀಸ್ ಸ್ನಿಫರ್ ಶ್ವಾನವೊಂದು ಸುಮಾರು 12 ಕಿ. ಮೀ. ದೂರ ಓಡುವ ಮೂಲಕ ವಾರದ ಹಿಂದಷ್ಟೇ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸರು ಕಂಡುಹಿಡಿದು ಬಂಧಿಸುವಲ್ಲಿ ನೆರವಾಗಿದೆ. ಈ ಮೂಲಕ ಹಿರೋ ಆಗಿ ಹೊರಹೊಮ್ಮಿದೆ. ದಾವಣಗೆರೆ ಜಿಲ್ಲೆಯ ಬಸವಪಟ್ಟಣದಲ್ಲಿ ಜುಲೈ 10 ರಂದು ಈ ಘಟನೆ ನಡೆದಿದೆ. ಸಾಲದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಒಬ್ಬಾತ ಪೊಲೀಸ್ ಠಾಣೆಯಿಂದ ಕಳವು ಮಾಡಲಾಗಿದ್ದ ರಿವಾಲ್ವರ್ ನಿಂದ ಮತ್ತೊರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಮೃತನನ್ನು ಚಂದ್ರ ನಾಯಕ್ ಎಂದು ಗುರುತಿಸಲಾಗಿದ್ದು, ಚೇತನ್ ಆರೋಪಿಯಾಗಿದ್ದಾನೆ.

 

ಪೊಲೀಸರ ಪ್ರಕಾರ ಆರೋಪಿ ಚೇತನ್ , ಚಂದ್ರನಾಯಕ್ ನಿಂದ 1.7 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಆದನ್ನು ಹಿಂತಿರುಗಿಸುವಂತೆ ಕೇಳಿದ್ದರಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಕೊಲೆ ನಡೆದು ವಾರ ಕಳೆದರೂ ಆರೋಪಿಯ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಮನೆಯಲ್ಲಿಯೇ ಇದ್ದು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. ಕೊನೆಗೆ ಈಗಾಗಲೇ 50 ಕೊಲೆ ಹಾಗೂ 60 ಕಳವು ಪ್ರಕರಣ ಬೇಧಿಸುವಲ್ಲಿ ನೆರವಾಗಿದ್ದ 10 ವರ್ಷದ ‘ತುಂಗಾ’ ಸುಮಾರು 12 ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಓಡುವ ಮೂಲಕ ಕಾಶಿಪುರದ ಮನೆಯೊಂದರ ಮುಂದೆ ನಿಂತಿದೆ. ಮನೆಯ ಮಾಲೀಕನನ್ನು ವಿಚಾರಿಸಿದಾಗ ಅಲ್ಲಿದ್ದ ಒಬ್ಬ ವ್ಯಕ್ತಿಯ ಬಗ್ಗೆ ಶಂಕೆ ಉಂಟಾಗಿದೆ. ನಂತರ ಆತನನ್ನು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದು, ಹುಬ್ಬಳ್ಳಿಯ ಪೊಲೀಸ್ ಠಾಣೆಯಿಂದ ರಿವಾಲ್ವರ್ ಕಳವು ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ ಎಂದು ಜಿಲ್ಲಾ ಎಸ್ಪಿ ಹನುಮಂತ ರಾಯ್ ತಿಳಿಸಿದ್ದಾರೆ. ತುಂಗಾ ನಮ್ಮ ಹಿರೋ ಆಗಿದ್ದು,. ಅದನ್ನು ಸನ್ಮಾನಿಸಲು ದಾವಣಗೆರೆಗೆ ಹೋಗುವುದಾಗಿ ಹೆಚ್ಚುವರಿ ಡಿಜಿಪಿ ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

Also Read  ಕಡಬ: ರೆಂಜಿಲಾಡಿಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಆನೆ ಶಿಬಿರದಲ್ಲಿ ಸಾವು

 

 

error: Content is protected !!
Scroll to Top