ಕುಟ್ರುಪ್ಪಾಡಿ ಹಾ.ಉ.ಸ.ಸಂಘದ ವಾರ್ಷಿಕ ಸಾಮಾನ್ಯ ಸಭೆ: 2.80ಲಕ್ಷ ರೂ.ನಿವ್ವಳ ಲಾಭ ► ಪ್ರತಿ ಲೀ.75ಪೈಸೆ ಬೋನಸ್ ಘೋಷಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.7, ಕುಟ್ರುಪ್ಪಾಡಿ ಹಾ.ಉ.ಸ.ಸಂಘದ 2016-17ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಕುಟ್ರುಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕುಟ್ರುಪ್ಪಾಡಿ ಹಾ.ಉ.ಸ.ಸಂಘದ ಅಧ್ಯಕ್ಷ ಕಿರಣ್ ಗೋಗಟೆಯವರು ಮಾತನಾಡಿ 2016-17ನೇ ಸಾಲಿನಲ್ಲಿ ಸಂಘವು 2.80 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಒಟ್ಟು 52,72,690ರೂ. ಹಾಲು ಖರೀದಿ ಮಾಡಿದ್ದು ಸ್ಥಳೀಯವಾಗಿ 2,02,649ರೂ. ಸ್ಥಳೀಯ ಹಾಲು ಮಾರಾಟ ಮಾಡಲಾಗಿದೆ. ಒಕ್ಕೂಟದಿಂದ ಹಾಲು ಮಾರಾಟದಿಂದ 57,86,623ರೂ. ಸಂಘಕ್ಕೆ ಬಂದಿರುತ್ತದೆ. ಜಿಲ್ಲಾ ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿ ಅವುಗಳ ಸದುಪಯೋಗ ಬಗ್ಗೆ ಮಾಹಿತಿ ನೀಡಿದರು. ಸಂಘದ ಪ್ರತಿಯೊಬ್ಬ ಸದಸ್ಯರು ಸೊಸೈಟಿಗೆ ಉತ್ತಮ ಗುಣಮಟ್ಟದ ಹಾಲು ಹಾಕುವುದರೊಂದಿಗೆ ಸಂಘವನ್ನು ಸಂಪೂರ್ಣ ಯಶಸ್ವಿಯತ್ತ ಮುನ್ನಡೆಸಲು ಸದಾ ಸಹಕರಿಸುತ್ತಿದ್ದೀರಿ. ಕಳೆದ 4ವರ್ಷಗಳ ಹಿಂದೆ ನಮ್ಮ ಸಂಘಕ್ಕೆ ಹಾಲು ಹಾಕುತ್ತಿರುವ ಸದಸ್ಯರಿಂದ ಗುಣಮಟ್ಟದ ಹಾಲನ್ನು ಪಡೆಯಲು ಸ್ವಲ್ಪ ತೊಂದರೆಯಾಗುತ್ತಿದ್ದು ಆದರೆ 4 ವರ್ಷಗಳಿಂದ ತಾಂತ್ರಿಕ ಆಧುನೀಕರಣ, ಶೀತಲೀಕರಣ ಯಂತ್ರದ ಮೂಲಕ ಪರಿಶೀಲಿಸುವುದರೊಂದಿಗೆ ಸಂಪುರ್ಣ ಗುಣಮಟ್ಟದ ಹಾಲನ್ನು ಪಡೆಯಲು ಸಾಧ್ಯವಾಗಿರುತ್ತದೆ ಎಂದು ಹೇಳಿದ ಅವರು ಬೆಳಿಗ್ಗೆ ಆದಷ್ಟು ಬೇಗನೇ ಅಂದರೆ 7.15 ಗಂಟೆಯೊಳಗೆ ಸದಸ್ಯರು ಸಂಘಕ್ಕೆ ಹಾಲು ಹಾಕುವ ಮೂಲಕ ಸಹಕರಿಸಬೇಕೆಂದರು.


ಸಂಘದ ನಿರ್ದೇಶಕರು, ಕುಟ್ರುಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಕರುಣಾಕರ ಗೋಗಟೆಯವರು ಮಾತನಾಡಿ ಜಿಲ್ಲೆಯಾದ್ಯಂತ ಹಲವಾರು ಹಾಲು ಸೊಸೈಟಿಗಳು ಎ ಗ್ರೇಡ್ ಬಂದಿದ್ದು ನಮ್ಮಲ್ಲಿ ಕೂಡ ಎಲ್ಲಾ ಸದಸ್ಯರು ಇಷ್ಟೊಂದು ಗುಣಮಟ್ಟದ ಹಾಲನ್ನು ನೀಡಿ ಸಹಕರಿಸುತ್ತಿದ್ದರು ನಮ್ಮ ಸೊಸೈಟಿ ಎ ಗ್ರೇಡ್ ಗೆ ಬಂದಿರುವುದಿಲ್ಲ. ಮುಂದಿನ ವರ್ಷವಾದರೂ ನಾವು ಎ ಗ್ರೇಡ್ ಬರಬೇಕಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ವಿಸ್ತರಣಾಧಿಕಾರಿ ಮಂಜುನಾಥ್ ರವರು ಸಂಘದಲ್ಲಿ ಹಾಲಿನ ಗುಣಮಟ್ಟದೊಂದಿಗೆ ಉತ್ತಮವಾದ ಲೆಕ್ಕಪತ್ರಗಳ ದಾಖಲಾತಿ ಸೇರಿದಂತೆ ಹಲವಾರು ರೀತಿಯಲ್ಲಿ ತುಲನೆ ಮಾಡಿ ಗ್ರೇಡ್ ನೀಡಲಾಗುತ್ತದೆ. ಆದರೆ ಗುಣಮಟ್ಟದ ಹಾಲು ನೀಡುವುದರಲ್ಲಿ ಇಲ್ಲಿಯ ಸೊಸೈಟಿ ಉತ್ತಮವಾಗಿದೆ ಎಂದರು.


ಸಂಘದ ಉಪಾಧ್ಯಕ್ಷ ವಿಶ್ವನಾಥ ರೈ, ನಿರ್ದೇಶಕರಾದ ಚಂದ್ರಹಾಸ, ನೋಣಪ್ಪ ಗೌಡ, ಪದ್ಮನಾಭ ನಾೖಕ್, ಧರ್ಮಾವತಿ ಹೊಸ್ಮಠ, ಕುಸುಮ ಆರಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದ್ದಲ್ಲದೆ ಸಲಹೆ ಸೂಚನೆ ನೀಡಿದರು. ಸಂಘದ ನಿರ್ದೇಶಕರಾದ ವೆಂಕಟೇಶ್ ಆರಿಗ ಸ್ವಾಗತಿಸಿ, ಕಾರ್ಯದರ್ಶಿ ಕೊರಗಪ್ಪ ಗೌಡ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಕೊನೆಗೆ ವಂದಿಸಿದರು. ಪಂಚಮಿಕಾಶಿನಾಥ್ ಗೋಗಟೆ ಪ್ರಾರ್ಥನೆ ಹಾಡಿದರು. ಹಾಲು ಪರೀಕ್ಷಕಿ ಲೀಲಾವತಿ, ಹಾಗೂ ಸಿಬ್ಬಂದಿ ಶಿವಪ್ಪ ಸಹಕರಿಸಿದರು.

error: Content is protected !!

Join the Group

Join WhatsApp Group