ಮಾಂಸ ಸಾಗಾಟಕ್ಕೆ ಅಡ್ಡಿ ➤ ವಾಹನ ಚಾಲಕನಿಗೆ ಹಲ್ಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.21: ಕುದ್ರೋಳಿಯ ವಧಾಗೃಹದಿಂದ ಕಂಕನಾಡಿಯ ಮಾರುಕಟ್ಟೆಗೆ ಮಾಂಸ ಸಾಗಾಟಕ್ಕೆ ಅಡ್ಡಿಪಡಿಸಿ , ಚಾಲಕನಿಗೆ ಹಲ್ಲೆಗೈದ ಕೃತ್ಯ ರವಿವಾರ ಬೆಳಗ್ಗೆ ಕಂಕನಾಡಿ ಬಳಿ ನಡೆದಿದೆ. ಕುದ್ರೋಳಿಯ ರಶೀದ್ ಎಂಬವರು ತನ್ನ ರಿಕ್ಷಾ ಟೆಂಪೋದಲ್ಲಿ ಕಂಕನಾಡಿ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಹೊಂದಿರುವ ಝಾಕಿರ್ ಎಂಬವರ ಅಂಗಡಿಗೆ ಸುಮಾರು 200 ಕೆಜಿಯಷ್ಟು ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದರು. ಸುಮಾರು ಐದಾರು ಮಂದಿಯನ್ನೊಳಗೊಂಡ ದುಷ್ಕರ್ಮಿಗಳ ತಂಡವು ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಹೈಲ್ಯಾಂಡ್ ಆಸ್ಪತ್ರೆ-ಕಂಕನಾಡಿ ಮಾರುಕಟ್ಟೆ ರಸ್ತೆ ಮಧ್ಯೆ ತಡೆದು ನಿಲ್ಲಿಸಿತು.

 

Also Read  ಸಿಲಿಂಡರ್ ಸ್ಫೋಟ: ಒಂದೇ ಕುಟುಂಬದ ಐವರಿಗೆ ಗಂಭೀರ ಗಾಯ

ಬಳಿಕ ಚಾಲಕ ರಶೀದ್‌ಗೆ ಹಲ್ಲೆಗೈದು, ರಿಕ್ಷಾ ಟೆಂಪೋಗೆ ಹಾನಿಗೈದರಲ್ಲದೆ ದನದ ಮಾಂಸಕ್ಕೆ ಸೀಮೆಎಣ್ಣೆ ಸುರಿದಿದ್ದಾರೆ. ದಾರಿಹೋಕರು ಜಮಾಯಿಸುವುದನ್ನು ಕಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.  ಕುದ್ರೋಳಿ ವಧಾಗೃಹದಿಂದ ಪರವಾನಿಗೆ ಪಡೆದು ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿ ಅಡ್ಡಿಪಡಿಸಿದ ದುಷ್ಕರ್ಮಿಗಳ ಕೃತ್ಯವನ್ನು ಮಾಂಸ ವ್ಯಾಪಾರಸ್ಥರ ಸಂಘ ಹಾಗೂ ಕಂಕನಾಡಿ ಮಾರುಕಟ್ಟೆ ಸಂಘದ ಅಧ್ಯಕ್ಷ ‌ಅಲಿ ಹಸನ್ ಖಂಡಿಸಿದ್ದಾರೆ.

 

 

error: Content is protected !!
Scroll to Top