ಕೊೈಲ: ರಸ್ತೆ ಕಾಮಗಾರಿಗೆ 1.25 ಕೋಟಿ ರೂಪಾಯಿ ಅನುದಾನ ಮಂಜೂರು ➤ ಎಸ್. ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ಜೂನ್.7., ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಕೊೈಲ-ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆಯಲ್ಲಿ ಕೊೈಲದಿಂದ ನೆಹರುತೋಟ ತನಕದ ರಸ್ತೆ ಡಾಂಬಾರೀಕರಣ ಕಾಮಗಾರಿಗೆ ಶನಿವಾರ ಶಿಲಾನ್ಯಾಸ ನಡೆಯಿತು.

ಶಾಸಕ ಎಸ್. ಅಂಗಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಈ ರಸ್ತೆಯ ಡಾಂಬರೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು 1.25 ಕೋಟಿ ರೂಪಾಯಿ ಅನುದಾನ ಮಂಜೂರು ಆಗಿದ್ದು, ಈ ಭಾಗದ ಜನರ ಬಹುಕಾಲದ ಸಮಸ್ಯೆಯೊಂದು ಪರಿಹಾರ ಆಗುವಂತಾಗಿದೆ ಎಂದರು.
ಈ ರಸ್ತೆಯಲ್ಲಿ ಬಹಳಷ್ಟು ಕಡೆ ಏರು ತಗ್ಗು ಇದ್ದು, ಇದನ್ನು ಸರಿಪಡಿಸಲಾಗುತ್ತದೆ ಹಾಗೂ ಇದೀಗ ರಸ್ತೆ 3.5 ಮೀಟರ್ ಇದ್ದು,  5.5 ಮೀಟರ್ ಆಗಲಮಾಡಲಾಗುವುದು, ಮುಂದೆ ಜಿಲ್ಲಾ ಮುಖ್ಯ ರಸ್ತೆಯಾದ ಬಳಿಕ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.


ಕೊೈಲ-ಹಿರೇಬಂಡಾಡಿ-ಉಪ್ಪಿನಂಗಡಿ ರಸ್ತೆಯಲ್ಲಿ-ಹಿರೇಬಂಡಾಡಿ-ಉಪ್ಪಿನಂಗಡಿ ಸಂಪರ್ಕದ 9 ಕಿ.ಮೀ. ಉದ್ದದ ಈ ರಸ್ತೆ ಕೊೈಲದಿಂದ ಶಾಖೆಪುರ ತನಕ ಕಡಬ ತಾಲ್ಲೂಕು, ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತು ಶಾಖೆಪುರದಿಂದ ಉಪ್ಪಿನಂಗಡಿ ತನಕ ಪುತ್ತೂರು ತಾಲ್ಲೂಕು ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಕೊೈಲ, ಹಿರೇಬಂಡಾಡಿ, ಉಪ್ಪಿನಂಗಡಿ ಗ್ರಾಮಗಳ ಜನತೆಯ ಮುಖ್ಯ ಸಂಪರ್ಕ ರಸ್ತೆಯಾಗಿದ್ದು, ರಸ್ತೆಯನ್ನು ಅವಲಂಭಿಸಿರುವ ಸಾವಿರಾರು ಮಂದಿ ಗ್ರಾಮಸ್ಥರು ಮತ್ತು ನೂರಾರು ವಾಹನಗಳವರು ದಿನನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂಬ ದೂರುಗಳು ವ್ಯಕ್ತವಾಗಿತ್ತು.


ಕೊೈಲದಿಂದ ಶಾಖೆಪುರ ತನಕದ ರಸ್ತೆ ಸುಮಾರು 25 ವರ್ಷಗಳ ಹಿಂದೆ ಸಂಪೂರ್ಣ ಡಾಂಬರೀಕರಣ ಆಗಿರುವುದು ಬಿಟ್ಟರೆ ಕೆಲವೊಮ್ಮೆ ತೇಪೆ ಕಾಮಗಾರಿ ನಡೆದಿದ್ದು, ಅದು ಒಂದೇ ಮಳೆಗೆ ಕೊಚ್ಚಿ ಹೋಗಿ ಮತ್ತೆ ಹೊಂಡ ಎದ್ದು ಕಾಣುವಂತಿತ್ತು. ಈ ನಿಟ್ಟಿನಲ್ಲಿ ರಸ್ತೆ ಮರುಡಾಮರೀಕರಣ ಮಾಡುವ ಬಗ್ಗೆ ಗ್ರಾಮ ಸಭೆ, ಜನ ಸಂಪರ್ಕ ಸಭೆಗಳಲ್ಲಿ ಬೇಡಿಕೆ ವ್ಯಕ್ತವಾಗುತ್ತಲೇ ಇತ್ತು.
ಕಾರ್ಯಕ್ರಮದಲ್ಲಿ ರಾಮಕುಂಜ ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಜಯಂತಿ ಗೌಡ, ಕೊೈಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹೇಮಾ ಮೋಹನ್‍ದಾಸ್ ಶೆಟ್ಟಿ, ಸದಸ್ಯ ವಿನೋದ ಮಾಲ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮಪಾಲ ರಾವ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಬೇಂಗದಪಡ್ಪು, ಶೀನಪ್ಪ ಗೌಡ, ಲಕ್ಷ್ಮೀನಾರಾಯಣ ರಾವ್ ಆತೂರು, ವೆಂಕಪ್ಪ ಪೂಜಾರಿ, ಸ್ಥಳೀಯ ಪ್ರಮುಖಾದ ಯದುಶ್ರೀ ಆನೆಗುಂಡಿ, ರಾಜೇಶ್ ಶೆಟ್ಟಿ, ಶ್ರೀಮತಿ ದಿವ್ಯ ರವಿ ಗಂಡಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group