ಆಯುಷ್ ಇಲಾಖೆಯ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಯುರ್ವೇದ ಔಷಧಿ ವಿತರಣೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.28.,  ಕೊರೋನಾ ವೈರಸ್ ತಡೆಗಟ್ಟಲು ಆರೋಗ್ಯ ಇಲಾಖೆಯ ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕ ಜನರು ಶ್ರಮಿಸುತ್ತಿದ್ದು ಅವರ ಸೇವೆ ಅನನ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅವರ ಸೇವೆಯನ್ನು ಗುರುತಿಸಿ ಅಭಿನಂದಿಸಬೇಕು ಎಂದು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಸಹನಾ ಹೇಳಿದರು.

ಬೆಳ್ತಂಗಡಿ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ ಇಲಾಖೆಯ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಚ್ಯವನಪ್ರಾಶ ಅವಲೇಹವನ್ನು ವಿತರಿಸಿ ಮಾತನಾಡಿದ ಅವರು, ಹಿಂದೆ ಋಷಿ ಮುನಿಗಳು ಗಿಡ ಮೂಲಿಕೆಗಳನ್ನು ಬಳಸಿ ಆಯುರ್ವೇದ ಚಿಕಿತ್ಸೆಯ ಮೂಲಕ ಅನೇಕ ಖಾಯಿಲೆಗಳನ್ನು ಗುಣಪಡಿಸುತ್ತಿದ್ದರು.  ವೈರಸ್ ಸೋಂಕಿತರಿರುವ ಸ್ಥಳದಲ್ಲಿ ನೇರ ಸಂಪರ್ಕ ಹಾಗೂ ಮೊದಲು ಧಾವಿಸಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ವೈರಾಣು ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಾದ ಚ್ಯವನಪ್ರಾಶ ಹಾಗೂ ಇತರ ಕಷಾಯಗಳನ್ನು ನಿಗದಿತ ಅಳತೆಯಲ್ಲಿ ಸೇವಿಸುವುದು ಒಳಿತು ಎಂದು ಸಲಹೆ ನೀಡಿದರು.

ಆಯುಷ್ ಇಲಾಖೆಯ ವತಿಯಿಂದ ಬೆಳ್ತಂಗಡಿ ತಾಲೂಕಿನ 247 ಆಶಾ ಕಾರ್ಯಕರ್ತೆಯರಿಗೆ ಚ್ಯವನಪ್ರಾಶ ವಿತರಿಸಿ, ಆಯುಷ್ ಮಾರ್ಗಸೂಚಿಯಂತೆ ಕರಿಮೆಣಸು, ದಾಲ್ಚೀನಿ, ಶುಂಠಿ, ತುಳಸಿ ಪತ್ರಗಳಿಂದ ತಯಾರಿಸಿದ ಕಷಾಯವನ್ನು ದಿನಾಲು ತೆಗೆದುಕೊಳ್ಳಬೇಕು. ಹಾಲು ಮತ್ತು ಅರಿಶಿನ ಮಿಶ್ರಿತ ಗೋಲ್ಡನ್ ಹಾಲು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಚ್ಯವನಪ್ರಾಶವನ್ನು ಪ್ರತಿ ದಿನವು ಹಾಲಿನಲ್ಲಿ ಬೆರೆಸಿ ತೆಗೆದುಕೊಳ್ಳುವ ಮೂಲಕ ಸ್ಥಿರ ಆರೋಗ್ಯ ಹೊಂದಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು. ಹರಿಣಿ ಮತ್ತಿತರು ಉಪಸ್ಥಿತರಿದರು.

error: Content is protected !!
Scroll to Top