ಪರಿಶಿಷ್ಟರ ಮೀಸಲಾತಿ ಹೆಚ್ಚಳ- ಫೆ.10ರಂದು ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.29    ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ  ಹೆಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಸರ್ಕಾರಿ, ಸಾರ್ವಜನಿಕ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತು ವರದಿಯನ್ನು ನೀಡುವಂತೆ ಆಯೋಗವನ್ನು ರಚಿಸಲಾಗಿರುತ್ತದೆ.

ನಿವೃತ್ತ ನ್ಯಾಯಮೂರ್ತಿ  ಹೆಚ್.ಎನ್. ನಾಗಮೋಹನ ದಾಸ್ ಇವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 10 ರಂದು ಬೆಳಿಗ್ಗೆ 10.30 ಗಂಟೆಗೆ “ಕರ್ನಾಟಕ ಕಲಾ ಮಂದಿರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುಣಸೂರು ರಸ್ತೆ, ಮೈಸೂರು  ಇಲ್ಲಿ “ಮೈಸೂರು ವಿಭಾಗ”ದ ಎಲ್ಲಾ ಜಿಲ್ಲೆಗಳ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಖಂಡರು ಮತ್ತು ಸಂಘಟನೆಗಳಿಂದ ಅಹವಾಲು ಸ್ವೀಕೃತಿ ಮತ್ತು ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ಸದರಿ ಸಭೆಯಲ್ಲಿ ಭಾಗವಹಿಸಿ ಸಲಹೆ ಮತ್ತು ಅಹವಾಲುಗಳನ್ನು ಲಿಖಿತ ರೂಪದಲ್ಲಿ ನೀಡಬಹುದಾಗಿದೆ. ಸಮಾಲೋಚನಾ ಸಭೆಯಲ್ಲಿ ಮೌಖಿಕವಾಗಿ ವಿಚಾರ ಅಥವಾ ಅಭಿಪ್ರಾಯವನ್ನು ತಿಳಿಸಲು ಕಾರ್ಯಕ್ರಮ ಪ್ರಾರಂಭವಾಗುವ ಒಂದು ಗಂಟೆ ಮೊದಲು ಸಮಾಲೋಚನಾ ಸಭೆ ನಡೆಯುವ ಸ್ಥಳದ ಹೊರಗಡೆ ಅದಕ್ಕಾಗಿ ತೆರೆಯಲಾಗುವ ಜಿಲ್ಲಾವಾರು ಕೌಂಟರ್ ಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವವರು ಮಾತ್ರ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶವಿರುತ್ತದೆ ಎಂದು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ದ.ಕ ಜಿಲ್ಲೆ ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group