ಸರಸ್ವತೀ ಪದವಿಪೂರ್ವ ವಿದ್ಯಾಲಯ ಕಡಬ – ಬೀಳ್ಕೊಡುಗೆ ಸಮಾರಂಭ ➤ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ – ಪ್ರಮೋದ್ ಕುಮಾರ್

(ನ್ಯೂಸ್ ಕಡಬ) newskadaba.com, ಕಡಬ, ಜ.29   ನಿರ್ದಿಷ್ಠ ಗುರಿ ಹಾಗೂ ಉದ್ದೇಶಗಳನ್ನು ಇಟ್ಟುಕೊಂಡು ಸತತ ಪ್ರಯತ್ನ ಮಾಡಿದಲ್ಲಿ ಯಶಸ್ಸು ಸಾಧ್ಯ. ವಿದ್ಯಾರ್ಥಿದೆಸೆಯಲ್ಲಿ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅನುಭವಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಶ್ರೀ ಪ್ರಮೋದ್ ಕುಮಾರ್ ತಿಳಿಸಿದರು.
ಅವರು ಸರಸ್ವತೀ ಪದವಿಪೂರ್ವ ವಿದ್ಯಾಲಯ ಕಡಬ ಇಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, “ಯಾವುದೇ ಕ್ಷೇತ್ರದಲ್ಲಿದ್ದರೂ ವೃತ್ತಿಯಲ್ಲಿದ್ದರೂ ಉತ್ತಮ ಗುಣ ನಡತೆಗಳನ್ನು ಮೈಗೂಡಿಸಿಕೊಳ್ಳಬೇಕು. ಆ ಮೂಲಕ ಉನ್ನತಿಗೆ ಏರಿ ಇತರರಿಗೆ ಮಾದರಿಯಾಗಬೇಕು” ಎಂದರು.


ಕಾರ್ಯಕ್ರಮದ ಇನ್ನೋರ್ವ ಅತಿಥಿ ಮಾಣಿಪ್ಪಾಡಿ ನರ್ಸರಿ ಹೊಸಮಠ ಇದರ ಮಾಲಕ ಶ್ರೀ ತಿರುಮಲೇಶ್ ಭಟ್ ಕಾಲೇಜಿನ ಕಾರ್ಯಚಟುವಟಿಕೆಗಳ ಪತ್ರಿಕೆ ‘ಸ್ಪಂದನ’ವನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಡಬದ ಚಾರ್ಟೆಡ್ ಅಕೌಂಟೆಂಟ್ ಶ್ರೀ ಅರುಣ್ ಕುಮಾರ್ ಹಾಗೂ ಸಂಸ್ಥೆಯ ಸಂಚಾಲಕ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅತಿಥಿಗಳ ಸಮ್ಮುಖದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದೀಪವನ್ನು ಹಸ್ತಾಂತರಿಸುವ ಮೂಲಕ ಜವಬ್ಧಾರಿಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಇದೇ ಸಂಧರ್ಭದಲ್ಲಿ ಸಂಸ್ಥೆಗೆ ಮಾತಿನ ಮಂಟಪವನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀ ರವಿರಾಜ್ ಶೆಟ್ಟಿ ಮಾತನಾಡಿ ಒಳ್ಳೆಯ ಸಂಕಲ್ಪದೊಂದಿಗೆ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಈಗ ಅದು ಬೇರೆ ಬೇರೆ ಕ್ಷೇತ್ರದಲ್ಲಿ ಫಲ ನೀಡುತ್ತಿರುವುದು ನಿಜವಾಗಿಯು ಸಾರ್ಥಕತೆಯ ಭಾವ ಮೂಡುತ್ತದೆ. ಇದಕ್ಕೆ ಕಾರಣೀಕರ್ತರಾದ ಎಲ್ಲರನ್ನೂ ಈ ಸಂಧರ್ಭದಲ್ಲಿ ಸ್ಮರಿಸಿದರು. ಸಂಸ್ಥೆಯ ಪ್ರಾಚಾರ್ಯ ಮಹೇಶ್ ನಿಟಿಲಾಪುರ ಪ್ರಸ್ತಾವನೆ ಮೂಲಕ ಸ್ವಾಗತಿಸಿ, ಪ್ರಥಮ ಪಿಯುಸಿ ವಿದ್ಯಾರ್ಥಿ ಯಜ್ಞೇಶ್ ವಂದಿಸಿ, ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕಿ , ಕೋಶಾಧಿಕಾರಿ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group