ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಜತ ಸಂಭ್ರಮದ ಕಾರ್ಯಕರ್ತರಿಗೆ ಪ್ರಭೋಧನ – ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಕಡಬ, ಜ.9    ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯವನ್ನು ಎತ್ತಿಹಿಡಿಯುವ ಶಿಕ್ಷಣದ ಅಗತ್ಯವಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ನುಡಿದರು. ಅವರು ಕಡಬ ತಾಲೂಕು ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ರಜತ ಸಂಭ್ರಮದ ಕಾರ್ಯಕರ್ತರಿಗೆ ಪ್ರಭೋಧನ-ಅಭಿನಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕನ್ನಡ ಭಾಷೆಯ ಉಳಿವಿಗಾಗಿ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಬೇಕು ಇದರಿಂದ ಸಮಾಜದ ಮಧ್ಯೆ ಅಧ್ಯಾಪಕನಿಗೆ ಗೌರವ ಸಿಗಬೇಕು ಪಾಶ್ಚತ್ಯ ಚಿಂತನೆಯಿಂದ ನಮ್ಮ ಸಂಸ್ಕಾರ, ಸಂಸ್ಕೃತಿ ಬೆಳೆಯಲು ಸಾಧ್ಯವಿಲ್ಲ. ಅದಕ್ಕಾಗಿ ಭಾರತಿ ಶಾಲೆಯಂತಹ ವಿದ್ಯಾಸಂಸ್ಥೆಯನ್ನು ಇನ್ನಷ್ಟು ಸ್ಥಾಪಿಸಿ ಬೆಳೆಸಬೇಕು ಎಂದರು.


ಮುಖ್ಯ ಅತಿಥಿ ನ್ಯಾಯವಾದಿ ಅರುಣಾ ಶ್ಯಾಮ್ ಮಾತನಾಡಿ ಕಾರ್ಯಕರ್ತರ ಪರಿಶ್ರಮದಿಂದ ಭಾರತಿ ಶಾಲೆ ರಜತ ಮಹೋತ್ಸವ ಸಂಭ್ರಮ ಬಹಳ ವಿಜ್ರಂಭಣೆಯಿಂದ ನಡೆದಿದೆ. ಸೈನಿಕರು ದೇಶದ ರಕ್ಷಣೆ ಮಾಡಿದರೆ, ನಾವು ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಕಾರ್ಯಗಳನ್ನು ಮಾಡಬೇಕು. ಪೌರತ್ವ ಕಾಯ್ದೆಯಿಂದ ಭಾರತೀಯರಿಗೆ ಯಾವುದೇ ತೊಂದರೆ ಇಲ್ಲ ಅಪಪ್ರಚಾರಕ್ಕೆ ಯಾರು ಕಿವಿಕೊಡಬಾರದು ಎಂದು ತಿಳಿಸಿದರು. ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ದೇವಸ್ಥಾನ ಹೊರನಾಡಿನ ಪ್ರಮುಖರಾದ ರಾಜಗೋಪಾಲ ಜ್ಯೋತಿಷಿಯವರು ಮಾತನಾಡಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ರಜತ ಮಹೋತ್ಸವ ಬೆಳ್ಳಿಯಂತೆ ಮಿಂಚಿದ್ದು ಇದಕ್ಕೆ ವಿದ್ಯಾಭಿಮಾನಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರವೇ ಕಾರಣವಾಗಿದೆ. ಪಾಶ್ಚತ್ಯ ಶಿಕ್ಷಣದಿಂದ ನಮ್ಮ ಸಂಸ್ಕೃತಿಗೆ ದಕ್ಕೆಯಾಗುತ್ತಿದ್ದು ನಾವೆಲ್ಲರೂ ಸೇರಿ ಶ್ರೀಭಾರತೀಯ ಶಿಕ್ಷಣವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಸುರೇಶ್ ಕೂಡೂರು, ಸಂಚಾಲಕ ಈಶ್ವರ ಗೌಡ ಪಜ್ಜಡ್ಕ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೃಷ್ಣಕುಮಾರ್ ಅತ್ರಿಜಾಲು ದಂಪತಿಗಳನ್ನು, ಹಿರಿಯ ಕಾರ್ಯಕರ್ತ ಕುಶಾಲಪ್ಪ ಗೌಡ ಕಜೆಯವರನ್ನು, ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ರಜತ ಮಹೋತ್ಸವ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಗಂಗಾಧರ ಗೌಡ ಕುಂಡಡ್ಕ ಸ್ವಾಗತಿಸಿ, ಗಣರಾಜ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯ ಮಾತಾಜಿ ಕನಕಲತಾ ಎಸ್. ಎನ್ ಭಟ್ ವಂದಿಸಿದರು.

error: Content is protected !!

Join the Group

Join WhatsApp Group