‘ರಾಮಕುಂಜದಲ್ಲಿ ಕಡಬ ತಾ| ಪ್ರಥಮ ಸಾಹಿತ್ಯ ಸಮ್ಮೇಳನ’ ➤ ಕಸಾಪ ಸಮಾಲೋಚನಾ ಸಭೆಯಲ್ಲಿ ನಿರ್ಧಾರ; ಸ್ವಾಗತ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com,  ಕಡಬ, ಜ.8    ಕಡಬ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆಬ್ರವರಿ ಕೊನೆಗೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ನಡೆಸಲು ಜ.7ರಂದು ರಾಮಕುಂಜ ಮಹಾವಿದ್ಯಾಲಯದಲ್ಲಿ ನಡೆದ ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸಭೆ ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ್‍ರವರು ಮಾತನಾಡಿ, ನೂತನ ಕಡಬ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದು ಜನಾರ್ದನ ಗೌಡ ಪಣೆಮಜಲುರವರು ಪ್ರಥಮ ಅಧ್ಯಕ್ಷರಾಗಿ ನೇಮಕಗೊಂಡು ಅಧಿಕಾರವೂ ಸ್ವೀಕರಿಸಿದ್ದಾರೆ. ಕಡಬ ತಾಲೂಕಿಗೆ ಸಂಬಂಧಿಸಿದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ರಾಮಕುಂಜದಲ್ಲಿ ನಡೆಯಬೇಕೆಂಬುದು ಜಿಲ್ಲಾಧ್ಯಕ್ಷರ ಸಹಿತ ಎಲ್ಲರ ಅಪೇಕ್ಷೆಯೂ ಆಗಿದೆ. ಈ ಬಗ್ಗೆ ಈಗಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಪೇಜಾವರ ಶ್ರೀಗಳ ಹುಟ್ಟೂರಿನಲ್ಲಿ ನಡೆಯುತ್ತಿರುವ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅವರಿಗೆ ಅರ್ಪಣೆ ಮಾಡಲಾಗುವುದು ಎಂದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ಸರಳ ರೀತಿಯಲ್ಲಿ ಮಾದರಿಯಾಗಿ ಆಚರಿಸಲಾಗುವುದು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು. ಜನಾರ್ದನ ಗೌಡರವರು ಮಾತನಾಡಿ, ವಿದ್ಯಾಸಂಸ್ಥೆಗಳ ಮೂಲಕ ರಾಜ್ಯದಲ್ಲೇ ಹೆಸರು ಮಾಡಿರುವ ರಾಮಕುಂಜವು ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸೂಕ್ತವಾಗಿದೆ. ಇಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಸಾಕಷ್ಟು ಮಂದಿ ಅನುಭವಿಗಳಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿದೆ. ಕಡಬ ಹಾಗೂ ಪುತ್ತೂರು ತಾಲೂಕಿನ ಸಾಹಿತ್ಯ ಪರಿಷತ್‍ನ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕೆಂದು ಹೇಳಿದರು. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ನಿರ್ದೇಶಕ ವೇದವ್ಯಾಸ ರಾಮಕುಂಜ, ಪ್ರಾಂಶುಪಾಲ ಡಾ.ಸಂಕೀರ್ತ ಹೆಬ್ಬಾರ್, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸತೀಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿರಿಯ ಸಾಹಿತಿಗಳಾದ ಬಿ.ವಿ.ಅರ್ತಿಕಜೆ, ಹೆಚ್.ಜಿ.ಶ್ರೀಧರ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಜಿ.ಪಂ.ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಗಣರಾಜ್ ಕುಂಬ್ಳೆ, ಕೊಕ್ಕಡ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈ ಪಿ.ಕಡಬ, ನಿವೃತ್ತ ಮುಖ್ಯಶಿಕ್ಷಕ ಗುಮ್ಮಣ್ಣ ಗೌಡ ರಾಮಕುಂಜ, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್., ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಬಾಲಕೃಷ್ಣ ಬಳ್ಳೇರಿ, ಕನ್ನಡ ಸಾಹಿತ್ಯ ಪರಿಷತ್‍ನ ಕಡಬ ತಾಲೂಕು ಗೌರವ ಕಾರ್ಯದರ್ಶಿ ಎ.ಸತೀಶ್ ನಾಯಕ್, ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರಮೀಳಾ, ಅನುಷಾ ವಿ.ಎ., ತನುಜಾ ಬಿ.ಜಿ., ರೇವತಿ ಬಿ., ಸುಜಾತ ಕೆ., ಪವಿತ್ರ ಕೆ., ಮಮತ ಕೆ., ಸಾಯಿಸುಮ ನಾವಡ, ರಘುರಾಮ ಕೆ., ಅಜಿತ್ ಕುಮಾರ್, ಗುರುಕಿರಣ್ ಶೆಟ್ಟಿ, ಕಡಬ ಸರಸ್ವತಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಜೋನ್ ವೇಗಸ್ ಕಡಬ, ರುದ್ರ ನಾಯ್ಕ್ ಟಿ., ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು. ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅಧ್ಯಕ್ಷರಾಗಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಇ.ಕೃಷ್ಣಮೂರ್ತಿ ಕಲ್ಲೇರಿ, ಕಾರ್ಯಾಧ್ಯಕ್ಷರಾಗಿ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಂ.ಸತೀಶ್ ಭಟ್, ಸಂಚಾಲಕರಾಗಿ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ನಿರ್ದೇಶಕ ವೇದವ್ಯಾಸ ರಾಮಕುಂಜ, ಸಹ ಸಂಚಾಲಕರಾಗಿ ಪ್ರಾಂಶುಪಾಲ ಡಾ.ಸಂಕೀರ್ತ ಹೆಬ್ಬಾರ್, ಕಾರ್ಯದರ್ಶಿಗಳಾಗಿ ಟಿ.ನಾರಾಯಣ ಭಟ್, ಗಣರಾಜ್ ಕುಂಬ್ಳೆ, ಕೋಶಾಧಿಕಾರಿಯಾಗಿ ಕೆ.ಸೇಸಪ್ಪ ರೈ, ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ರಾವ್ ಆತೂರು ಹಾಗೂ ಉಪಾಧ್ಯಕ್ಷರು, ವಿವಿಧ ಉಪಸಮಿತಿಗಳಿಗೆ ಸಂಚಾಲಕರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ರಾಮಕುಂಜದಲ್ಲಿ ನಡೆಯುವ ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇತ್ತೀಚೆಗೆ ಹರಿಪಾದ ಸೇರಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಅರ್ಪಣೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಮೆರವಣಿಗೆ ಆಯೋಜನೆ ಸೇರಿದಂತೆ ಕಾರ್ಯಕ್ರಮದ ರೂಪುರೇಷೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

error: Content is protected !!

Join the Group

Join WhatsApp Group