ಶಕ್ತಿ ಬ್ಲ್ಯಾಕ್ ಸೊಲ್ಜಾರ್ ಕಾಂಪೊಸ್ಟಿಂಗ್ ಘಟಕದ ಉದ್ಘಾಟನೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.2   ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್ ಮತ್ತು ಶಕ್ತಿ ಪಪೂ ಕಾಲೇಜಿನ ವತಿಯಿಂದ ಸ್ವಚ್ಛ ಭಾರತ್‍ ಅಭಿಯಾನದ ನಿಮಿತ್ತವಾಗಿ ಶ್ರೀ ರಾಮಕೃಷ್ಣ ಮಿಷನ್ ಮಂಗಳೂರಿನ ಸಹಯೋಗದೊಂದಿಗೆ ಶಕ್ತಿ ಬ್ಲ್ಯಾಕ್ ಸೋಲ್ಜಾರ್ ಕಾಂಪೊಸ್ಟಿಂಗ್ ಘಟಕವನ್ನು ಶಾಲಾ ಕ್ಯಾಂಪಸ್‍ನಲ್ಲಿ ಸ್ಥಾಪಿಸಲಾಗಿದ್ದು, ಈ ಘಟಕವನ್ನು ಶ್ರೀ ರಾಮಕೃಷ್ಣ ಮಿಷನ್‍ನ ಸಂಯೋಜಕರಾದ ಶ್ರೀ ಏಕಗಮ್ಯಾನಂದ ಸ್ವಾಮೀಜಿಯವರು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿಜೀಯವರ ಸ್ವಚ್ಛ ಭಾರತದ ಕಲ್ಪನೆಗೆ ಶಕ್ತಿ ಎಜ್ಯುಕೇಶನ್‍ ಟ್ರಸ್ಟ್ ಸಂಪೂರ್ಣವಾಗಿ ಕೈ ಜೋಡಿಸಿದೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ಆರಂಭಿಸಲಾಗಿರುವ ಸ್ವಚ್ಛತಾ ಆಂದೋಲನ ಅಭಿಯಾನ ಮುಂದುವರಿದ ಭಾಗ ಈ ಕಾಂಪೊಸ್ಟಿಂಗ್ ಘಟಕ.


ವಸತಿ ನಿಲಯದಲ್ಲಿ ಅಡುಗೆಗೆ ಉಪಯೋಗಿಸಿದ ತರಕಾರಿ ಹಾಗೂ ಊಟ ಮತ್ತು ಇತರೆ ತಿಂಡಿಗಳು ಉಳಿದ ನಂತರ ಅದನ್ನು ಸಂಗ್ರಹಿಸಿ ಈ ಘಟಕಕ್ಕೆ ಸುರಿಯುತ್ತೇವೆ. ಈ ಘಟಕದಿಂದ ಒಂದು ತಿಂಗಳ ನಂತರ ಸುಮಾರು 25ಕೆಜಿ ಗೊಬ್ಬರವು ದೊರೆಯುತ್ತದೆ. ನಮ್ಮ ಕ್ಯಾಂಪಸ್‍ನಲ್ಲಿರುವ ಹಸಿರು ತರಕಾರಿ ಹಾಗೂ ಇತರೆ ಗಿಡ ಮರಗಳಿಗೆ ಇದು ಗೊಬ್ಬರವಾಗಿ ಮಾರ್ಪಡುತ್ತದೆ. ಇಂತಹ ವಿನೂತನವಾದ ನೈಸರ್ಗಿಕವಾದ ಘಟಕವನ್ನು ಪ್ರಾರಂಭಿಸಿರುವ ಸಂಸ್ಥೆಯ ಶ್ರಮವನ್ನು ಶ್ರೀ ರಾಮಕೃಷ್ಣ ಮಿಷನ್‍ ಅಭಿನಂದಿಸುತ್ತದೆ ಎಂದು ಸ್ವಾಮೀಜಿ ಹೇಳಿದರು. ಸ್ವಾಮೀಜಿ ಮಾತನಾಡುತ್ತಾ ಯಾವುದೇ ವಸ್ತುವು ನಿರುಪಯುಕ್ತವಲ್ಲ. ಅದನ್ನು ಪುನರ್ ಉಪಯೋಗ ಮಾಡುವುದರಲ್ಲಿ ಜಾಣ್ಮೆ ಅಡಗಿದೆ ಎಂದು ಹೇಳಿದರು. ಮಂಗಳೂರಿನ ಜನ ಬುದ್ಧಿವಂತರಾಗುತ್ತಿದ್ದಾರೆ. ಅವರವರ ಮನಯಲ್ಲಿಯೇ ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸುವ ವಿಧಾನವನ್ನು ಕಲಿಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಹೆಚ್ಚು ಹೆಚ್ಚು ಲಾಭವಾಗುತ್ತದೆ. ಮಂಗಳೂರಿನ ವಾಮಂಜೂರಿನಲ್ಲಿ ಕಸ ಶೇಖರಣೆ ಮಾಡುವ ಜಾಗದಲ್ಲಿ ಕಸವನ್ನು ಹಾಕಿದರೆ ಭೂಮಿ ಹಾಳಾಗುತ್ತದೆ. ಆದ್ದರಿಂದ ಅವರವರ ಮನೆಯಲ್ಲಿ ಹಸಿ ಕಸವನ್ನು ಕಾಂಪಸ್ಟಿಂಗ್ ಮಾಡುವ ವಿಧಾನಕ್ಕೆ ನಾವೆಲ್ಲರೂ ತಯಾರಾಗಬೇಕೆಂದು ಹೇಳಿದರು.

ದ.ಕ ಜಿಲ್ಲೆಯಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯು ಪ್ರಥಮವಾಗಿ ಈ ಕಾಂಪೊಸ್ಟಿಂಗ್ ಘಟಕವನ್ನು ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. ಈ ಘಟಕದಲ್ಲಿ ಬ್ಲ್ಯಾಕ್ ಸೊಲ್ಜಾರ್ ಎಂಬ ಹುಳದ ಉತ್ಪಾದನೆ ಪ್ರಾರಂಭವಾಗುತ್ತದೆ. ಇದು ಕಾಂಪೊಸ್ಟಿಂಗ್ ಗೊಬ್ಬರವನ್ನುಉತ್ಪಾದನೆ ಮಾಡುತ್ತದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಈ ವಿಷಯದ ಮೇಲೆ ಗಮನ ನೀಡಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾೈಕ್ ವಹಿಸಿ ಮಾತನಾಡಿ, ಶ್ರೀ ರಾಮಕೃಷ್ಣ ಮಿಷನ್ ಸ್ವಚ್ಛ ಭಾರತದ ಕಲ್ಪನೆಯೊಂದಿಗೆ ಸಂಪೂರ್ಣ ಮಂಗಳೂರನ್ನು ಸ್ವಚ್ಛತೆಯನ್ನು ಮಾಡಿದೆ. ಇದು ದೇಶಕ್ಕೆ ಮಾದರಿಯಾಗಿದೆ. ಇಂತಹ ಕೆಲಸಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ಸಗುಣ ಸಿ. ನಾೈಕ್, ಪ್ರಧಾನ ಸಲಹೆಗಾರ ರಮೇಶ್ ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‍ ರೈ, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ, ಶ್ರೀ ರಾಮಕೃಷ್ಣ ಮಿಷನ್‍ನ ಸ್ವಚ್ಛ ಭಾರತ್ ಸಂಚಾಲಕ ರಂಜನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ್‍ ಕಾರ್ಯಕ್ರಮದ ಯಶಸ್ವಿಗೋಸ್ಕರ ಶ್ರೀ ಏಕಗಮ್ಯಾನಂದ ಸ್ವಾಮೀಜಿಯನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಸ್ವಾಗತವನ್ನು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ನಿರೂಪಣೆಯನ್ನುಅಧ್ಯಾಪಕಿ ಕು. ದೀಪ್ತಿ ಮತ್ತು ವಂದನಾರ್ಪಣೆಯನ್ನು ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ಶ್ರೀ ಪ್ರಭಾಕರ ಜಿ.ಎಸ್ ನೆರೆವೇರಿಸಿದರು.

error: Content is protected !!

Join the Group

Join WhatsApp Group