ಟಿವಿ ವಾಹಿನಿಗಳ ಕಾರ್ಯಕ್ರಮಗಳ ಕುರಿತ ದೂರು :  ಸಹಾಯವಾಣಿ ಸ್ಥಾಪನೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೇಬಲ್ ಟಿವಿ ಮತ್ತು ಉಪಗ್ರಹ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ದೂರುಗಳನ್ನು ಸಲ್ಲಿಸಲು 24×7 ಸಾರ್ವಜನಿಕ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ಕೇಬಲ್ ಸೇವೆಯಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮ ಸದಭಿರುಚಿ ಅಥವಾ ಸಭ್ಯತೆಯ ವಿರುದ್ಧ, ಮಿತ್ರ ರಾಷ್ಟ್ರಗಳ ಟೀಕೆ, ಧರ್ಮ, ಸಮುದಾಯ ಅಥವಾ ಧಾರ್ಮಿಕ ಸಮೂಹಗಳನ್ನು ನಿಂದಿಸುವ ಮಾತುಗಳು, ದೃಶ್ಯಗಳು ಅಥವಾ ಕೋಮುವಾದಿ ಭಾವನೆಗಳನ್ನು ಉತ್ತೇಜಿಸುವುದು, ಯಾವುದೇ ಅಸಹ್ಯಕರ, ಮಾನನಷ್ಟ ಮಾಡುವಂತ ಉದ್ದೇಶಪೂರ್ವಕ, ಸುಳ್ಳು, ಸೂಚನಾತ್ಮಕ ವ್ಯಂಗ್ಯೋಕ್ತಿ, ಅರ್ಧ ಸತ್ಯ, ಹಿಂಸೆಯನ್ನು ಉತ್ತೇಜಿಸುವ, ಪ್ರಚೋದಿಸುವ, ಕಾನೂನು ಮತ್ತು ಶಿಸ್ತುಪಾಲನೆ ಕೆಣಕುವುದು, ರಾಷ್ಟ್ರ ವಿರೋಧಿ ಭಾವನೆಯನ್ನು ಉತ್ತೇಜಿಸುವುದು ಅಥವಾ ನ್ಯಾಯಾಲಯ ನಿಂದನೆಗೆ ಕಾರಣವಾಗುವಂತ ಅಂಶಗಳು ಕಂಡುಬಂದರೆ ಯಾವುದೇ ನಾಗರೀಕರು ಅದರ ವಿರುದ್ದ ಈ ಸಹಾಯವಾಣಿಗೆ ದೂರು ಸಲ್ಲಿಸಬಹುದಾಗಿದೆ. ಕಾಯ್ದೆಯ ಪರಿಚ್ಛೇದ 7 ರಂತೆ ಜಾಹೀರಾತು ಸಂಹಿತೆಗೆ ಸಂಬಂಧಿಸಿದಂತೆ ಕೇಬಲ್ ಸೇವೆಯಲ್ಲಿ ಪ್ರಸಾರವಾಗುವ ಜಾಹೀರಾತುಗಳು ದೇಶದ ಕಾನೂನುಗಳಿಗೆ ಪೂರಕವಾಗಿರಬೇಕು ಮತ್ತು ಚಂದಾದಾರರ ನೈತಿಕತೆ ಮತ್ತು ಸಭ್ಯತೆ, ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡಬಾರದು. ಯಾವುದೇ ಮತ, ಜಾತಿ, ವರ್ಣ, ಕೋಮು ಮತ್ತು ರಾಷ್ಟ್ರೀಯತೆಯನ್ನು ಅವಹೇಳನ ಮಾಡಬಾರದು.  ಭಾರತ ಸಂವಿಧಾನದ ಯಾವುದೇ ಉಪಬಂಧದ ವಿರುದ್ಧ ಇರಬಾರದು. ಜನರನ್ನು ಅಪರಾಧಕ್ಕೆ ಪ್ರಚೋದಿಸುವುದಾಗಲಿ, ಅಶಾಂತಿ ಅಥವಾ ಹಿಂಸೆಗೆ ಯಾವುದೇ ರೀತಿಯ ಅಶ್ಲೀಲತೆಗೆ ಕಾರಣವಾಗುವುದಕ್ಕೆ ಅವಕಾಶ ಉಂಟಾಗಬಾರದು. ಅಪರಾಧೀಕರಣ ಬಯಸುವಂತೆ ಬಿಂಬಿಸಿಬಾರದು ಹಾಗೂ ರಾಷ್ಟ್ರೀಯ ಲಾಂಛನ, ಸಂವಿಧಾನದ ಯಾವುದೇ ಭಾಗ ಅಥವಾ ವ್ಯಕ್ತಿ, ರಾಷ್ಟ್ರೀಯ ನಾಯಕರ ವ್ಯಕ್ತಿತ್ವ ಅಥವಾ ರಾಷ್ಟ್ರದ ಗಣ್ಯರ ಶೋಷಣೆಯಾಗಬಾರದು ಇವುಗಳನ್ನು ಉಲ್ಲಂಘಿಸಿದ್ದು ಕಂಡು ಬಂದಲ್ಲಿ  ದೂರುಗಳನ್ನು ಸಲ್ಲಿಸಬಹುದಾಗಿದ್ದು, ಸದರಿ ದೂರನ್ನು ಸಂಬಂಧಿಸಿದ ಜಿಲ್ಲಾ ನಿರ್ವಹಣಾ ಸಮಿತಿಗೆ/ ರಾಜ್ಯ ನಿರ್ವಹಣಾ ಸಮಿತಿಗೆ ಸೂಕ್ತ ಕ್ರಮಕ್ಕಾಗಿ ವರ್ಗಾಯಿಸಲಾಗುವುದು.

ಸಾರ್ವಜನಿಕರು ಹೆಚ್ಚು ಜಾಗೃತರಾಗಿ ನಿರ್ಭೀತಿಯಿಂದ ಯಾವುದೇ ದೂರು, ಆಕ್ಷೇಪಗಳನ್ನು  ಸಹಾಯವಾಣಿ ದೂರವಾಣಿ ಸಂಖ್ಯೆ: 080-22028013, 9480841212 ಗೆ ಸಲ್ಲಿಸುವಂತೆ ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group