ಧರ್ಮಸ್ಥಳ: ತಮ್ಮನಿಂದ ಅಣ್ಣನಿಗೆ ಆಸಿಡ್ ದಾಳಿ

(ನ್ಯೂಸ್ ಕಡಬ) newskadaba.com, ಬೆಳ್ತಂಗಡಿ , ಡಿ.4  ಅಣ್ಣನಿಗೆ ತಮ್ಮನು ರಬ್ಬರ್ ಹಾಲಿಗೆ ಬೆರಸಲು ಬಳಸುವ ರಾಸಾಯನಿಕ ದ್ರಾವಣವನ್ನು ಎರಚಿ ಜೀವ ಬೆದರಿಕೆ ಒಡ್ಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಕಡೆಂಬಿಲಡ್ಕ ಮನೆಯಲ್ಲಿ ನಡೆದಿದೆ.


ಚೀಂಕ್ರ ಎಂಬವರು ತನ್ನ ಪತ್ನಿ ಚಂದ್ರಾವತಿ ಮತ್ತು ಮಗಳು ಸೌಮ್ಯ ಎಂಬವಳೊಂದಿಗೆ ತನ್ನ ಮನೆಯಲ್ಲಿ ಮಾತನಾಡಿಕೊಂಡಿರುವಾಗ, ತಮ್ಮ ಗಣೇಶ ಮತ್ತು ಆತನ ಪತ್ನಿ ಅಮಿತಾ ಎಂಬವರು ಏಕಾಎಕಿ ಮನೆಯ ಒಳಗಡೆ ಬಂದು ಅಮಿತಾಳು ಚಂದ್ರಾವತಿಯ ಕುತ್ತಿಗೆಗೆ ಕೈಹಾಕಿ ಇವತ್ತು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿದಳು. ತನ್ನ ಪತ್ನಿಯನ್ನು ಬಿಡಿಸಲು ಮುಂದಾಗುತ್ತಿದ್ದಂತೆಯೇ ಗಣೇಶನು ತಾನು ತಂದಿದ್ದ ರಬ್ಬರ್ ಹಾಲಿಗೆ ಬೆರಸಲು ಬಳಸುವ ರಾಸಾಯನಿಕ ದ್ರಾವಣವನ್ನು ಚೀಂಕ್ರರವರ ಮೇಲೆ ಎರಚಿದ್ದುದರಿಂದ ವಿಪರೀತ ಉರಿಯಿಂದ ಜೋರಾಗಿ ಬೊಬ್ಬೆ ಹೊಡೆದಾಗ ಗಣೇಶ ಮತ್ತು ಅಮಿತಾ ಚೀಂಕ್ರ ಹಾಗೂ ಆತನ ಪತ್ನಿಯನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳಿಂದ ಬೈದು, ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಹೋದರು. ಗಣೇಶನು ರಾಸಾಯನಿಕ ದ್ರಾವಣವನ್ನು ಎರಚಿದ ಪರಿಣಾಮ ಕುತ್ತಿಗೆಗೆ ,ಎದೆ, ಎರಡೂ ಕೈಯ ತೋಳು,ಹೊಟ್ಟೆಯ ಭಾಗ, ಬೆನ್ನಿನ ಎಡ ಭಾಗಕ್ಕೆ ಸುಟ್ಟ ಗಾಯವಾಗಿದ್ದು ಗಾಯಾಳು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆ ► ಅಸಹಾಯಕ ಕುಟುಂಬಗಳಿಗೆ ಸಹಾಯಹಸ್ತ

error: Content is protected !!
Scroll to Top