ಎಚ್ಚರ ತಪ್ಪಿದರೆ ಅಪಾಯ, ತಡೆಗೋಡೆಗಳೂ ಇಲ್ಲ ➤ಅಪಾಯಕಾರಿ ಸ್ಥಿತಿಯಲ್ಲಿದೆ ಕಲ್ಲುಗುಡ್ಡೆ-ಕೊಣಾಜೆ ರಸ್ತೆ

 (ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ.22  ಇಚ್ಲಂಪಾಡಿ-ಕಲ್ಲುಗುಡ್ಡೆ-ಕಡ್ಯ ಕೊಣಾಜೆ ಸಂಪರ್ಕ ಕಲ್ಪಿಸುವ ಸಡಕ್ ರಸ್ತೆಯ ಕಲ್ಲುಗುಡ್ಡೆ-ಕೊಣಾಜೆ ರಸ್ತೆಯ ಹಲವೆಡೆ ರಸ್ತೆಯ ಅಂಚುಗಳಲ್ಲಿ ತಡೆಗೋಡೆಗಳಿಲ್ಲದೆ ಅಪಘಾತಗಳು ಸಂಭವಿಸುತ್ತಿದ್ದು, ಅಪಾಕಾರಿಯಾಗಿದೆ. ತಡೆಗೋಡೆ ನಿರ್ಮಿಸುವಂತೆ ಆಗ್ರಹವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.


ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ-ಕೊಣಾಜೆ ರಸ್ತೆಯಲ್ಲಿ ರೆಂಜಿಲಾಡಿ ಗ್ರಾಮದ ಮಾರಪ್ಪೆ ಎಂಬಲ್ಲಿವರೆಗೆ ಸಡಕ್‍ನಲ್ಲಿ ರಸ್ತೆ ಅಭಿವೃದ್ಧಿಗೊಂಡಿದ್ದು, ಆದರೆ ಈ ರಸ್ತೆಯ ಹಲವೆಡೆ ತೋಡಿನ ಬದಿಗಳಲ್ಲಿ ತಡೆಗೋಡೆಗಳಿಲ್ಲದೆ ವಾಹನ ಸವಾರರು ಅಪಾಯಕಾರಿ ಸ್ಥಿತಿಯಲ್ಲಿ ವಾಹನ ಚಲಾಯಿಸಬೇಕಾಗಿದೆ. ಈ ರಸ್ತೆಯ ಮಾರಪ್ಪೆ, ಕೇಪುಂಜ, ನಡುಗುಡ್ಡೆ, ಕಲ್ನಾರು, ಹರ್ಪಾಳ ಎಂಬಲ್ಲಿ ಅಪಾಯಕಾರಿದೆ ಎಂದು ಸಾರ್ವಜನಿರು ದೂರಿದ್ದಾರೆ. ಅಲ್ಲದೆ ಕೆಲವೆಡೆ ರಸ್ತೆ ತಿರುವುಗಳಲ್ಲಿ ಪೊದರುಗಳು ತುಂಬಿಕೊಂಡು ವಾಹನ ಸವಾರರು ಸಂಕಷ್ಟಪಡುವಂತಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು, ಎರಡು-ಮೂರು ಶಾಲಾ ಬಸ್‍ಗಳು ಸಂಚರಿಸುತ್ತಿವೆ.

ಈ ರಸ್ತೆಯ ತಿರುವುಗಳಲ್ಲಿ ವಾಹನ ಸವಾರರು ವೇಗವಾಗಿ ಬಂದಲ್ಲಿ ತಿರುವುಗಳನ್ನು ಎದುರಿಸಲು ಕಷ್ಟಕರವಾಗಿದ್ದು, ಮುಂದೆ ಹೋದರೆ ತೋಡಿಗೆ ಬೀಳುವ ಪರಿಸ್ಥಿತಿಯಲ್ಲಿದೆ. ಈ ಪ್ರದೇಶಗಳಲ್ಲಿ ಹಲವು ಬಾರಿ ವಾಹನ ಅವಘಡ ಸಂಬವಿಸಿದ್ದು, ಅದೃಷ್ಟವಶತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ವಾಹನಗಳಿಗೆ ಹಾನಿಯುಂಟಾದ ಘಟನೆಗಳು ನಡೆದಿದೆ ಎನ್ನುತ್ತಾರೆ ಗ್ರಾಮಸ್ಥರು. ವಾರದ ಹಿಂದೆ ಕಾರೊಂದು ನಿಯಂತ್ರಣ ತಪ್ಪಿ ತೋಡಿನ ಬದಿಯವರೆಗೆ ಹೋಗಿ ಮರದಲ್ಲಿ ಸಿಕ್ಕಿಕೊಂಡು ಬಚಾವಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ.  ಕೊಣಾಜೆ ಸಂಪರ್ಕ ರಸ್ತೆಯ ವಿವಿಧೆಡೆ ತೋಡಿನ ಸಮೀಪದಿಂದ ರಸ್ತೆ ನಿರ್ಮಿಸಿದ್ದರೂ, ತಡೆಗೋಡೆ ನಿರ್ಮಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಅಗತ್ಯವಾದಲ್ಲಿಯೂ ಈ ವ್ಯವಸ್ಥೆ ಮಾಡಿಲ್ಲ. ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ತೋಡಿನ ಬದಿಯಲ್ಲಿ ತಡೆಗೋಡೆ ನಿರ್ಮಿಸುವಂತೆ ಅಥವಾ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕಿದೆ.


ಇದೇ ರಸ್ತೆಯ ರೆಂಜಿಲಾಡಿಯ ಕೇಪುಂಜ ಬಳಿ ನಡುಗುಡ್ಡೆ ಎಂಬಲ್ಲಿ ಹರಿಯುತ್ತಿರುವ ತೋಡಿನ ಸಮೀಪ ರಸ್ತೆ ಅಂಚಿನವರೆಗೆ ರಸ್ತೆ ಕುಸಿತಗೊಂಡಿದ್ದು, ಸರಿಪಡಿಸುವ ಗೋಜಿಗೆ ಸಂಬಂಧಪಟ್ಟವರು ಇನ್ನೂ ಮುಂದಾಗಿಲ್ಲ. ಈ ರಸ್ತೆಯಲ್ಲಿಯೇ ನಿತ್ಯ ನೂರಾರು ವಾಹನಗಳು, ಶಾಲಾ ಬಸ್‍ಗಳು ಸಂಚರಿಸುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಬಗ್ಗೆ ಪಂಚಾಯತ್ ಸಭೆಯಲ್ಲಿಯೂ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿತ್ತು. ಈ ರಸ್ತೆಯ ಹಲವು ಕಡೆಗಳಲ್ಲಿ ಅಪಾಯಕಾರಿ ಸ್ಥಳಗಳಿದ್ದು, ಖಾಸಗಿಯವರು  ಗ್ರಾ.ಪಂ. ಗೆ ಕ್ರಮಕ್ಕೆ ಹಲವು ಬಾರಿ ಮನವಿ ಮಾಡಿದ್ದು, ಅಧಿಕ ಅನುದಾನ ಅಗತ್ಯವಿದೆ ಎಂದು ತಿಳಿದುಬಂದಿದ್ದು, ಶಾಸಕರ ಅಥವಾ ಮೇಲಿನಿಂದ ಅನುದಾನ ತರುವಲ್ಲಿ ಪ್ರಯತ್ನ ನಡೆದು, ಸರಿಪಡಿಸಬೇಕಿದೆ. ಸದ್ರಿ ರಸ್ತೆಯ ಅಪಾಯಕಾರಿ ಸ್ಥಿತಿ ಗತಿಗಳ ಬಗ್ಗೆ ಸಾರ್ವಜನಿಕರು ಗ್ರಾಮಸಭೆಯಲ್ಲಿ ಅರ್ಜಿ ನೀಡಿದ್ದಾರೆ. ಕೊಣಾಜೆ ರಸ್ತೆಯ ಅಪಾಯಕಾರಿ ಕಡೆಗಳಲ್ಲಿ ತಡೆಗೋಡೆ ನಿರ್ಮಿಸಲು ಅನುದಾನಕ್ಕಾಗಿ ತಾ.ಪಂ.ಗೆ ಮನವಿ ಮಾಡಲಾಗಿದೆ. ಗ್ರಾಮ ಪಂಚಾಯತ್ ಅನುದಾನದಿಂದ ಈ ಕೆಲಸ ಅಸಾಧ್ಯ.

error: Content is protected !!

Join the Group

Join WhatsApp Group