ವಳಕಡಮ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ ➤ಹೈನುಗಾರಿಕೆಯಿಂದ ಮಹಿಳೆಯರೂ ಅರ್ಥಿಕವಾಗಿ ಸಬಲೀಕರಣ-ರವಿರಾಜ್ ಹೆಗ್ಡೆ

 (ನ್ಯೂಸ್ ಕಡಬ) newskadaba.com ಕಡಬ, ನ.20  ಆಧುನಿಕ ಕಾಲದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಹೈನುಗಾರಿಕೆಯು ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸಹಾಯವಾಗುತ್ತದೆ ಎಂದು ದ.ಕ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.


ಕೊೈಲ ಗ್ರಾಮದ ವಳಕಡಮದಲ್ಲಿ ನೂತನವಾಗಿ ಆರಂಭಗೊಂಡಿರುವ ವಳಕಡಮ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಸುಳ್ಯ ಶಾಸಕ ಎಸ್.ಅಂಗಾರರವರು ಮಾತನಾಡಿ, ನಮ್ಮ ಬದುಕು ಯಾವಾಗಲೂ ಶ್ರಮದ ಬದುಕು ಆಗಬೇಕು, ಹೈನುಗಾರಿಕೆಯು ಒಂದು ಕುಟುಂಬದ ಜೀವನ ಪದ್ದತಿಯನ್ನೇ ಬದಲಾಯಿಸಬಲ್ಲದು. ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದ್ದು, ಹೈನುಗಾರಿಕೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಸಂಸ್ಥೆ ಉಳಿಯಬೇಕಾದಲ್ಲಿ ಅದರಲ್ಲಿ ಯಾವುದೇ ವಂಚನೆ ಇರಬಾರದು. ಪ್ರಾಮಾಣಿಕತೆ, ಗುಣಮಟ್ಟ ಕಾಪಾಡಿಕೊಳ್ಳುವ ಗುಣ ಸ್ವಾಭಾವಿಕವಾಗಿ ಸಂಘದ ಸದಸ್ಯರಲ್ಲಿ ಬರಬೇಕು ಎಂದರು.


ದ.ಕ ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್‍ಚಂದ್ರ ಶೆಟ್ಟಿಯವರು ಮಾತನಾಡಿ, ಸಂಘಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸರಬರಾಜು ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುತುವರ್ಜಿವಹಿಸಬೇಕು. ಈ ಭಾಗದ ಎಲ್ಲಾ ಮಹಿಳೆಯರು ಹೈನುಗಾರಿಕೆಯ ಫಲಾನುಭವಿಗಳು ಆಗಬೇಕು. ಹಾಲಿನ ಗುಣಮಟ್ಟವನ್ನು ಪ್ರತಿಯೊಬ್ಬರು ಕಾಪಾಡಬೇಕು ಎಂದರು. ದ.ಕ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್.ಕೆ, ಸವಿತಾ ಎನ್ ಶೆಟ್ಟಿ, ನಿರ್ವಾಹಕ ನಿರ್ದೇಶಕ ಡಾ|.ಜಿ.ವಿ.ಹೆಗ್ಡೆ, ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಉಪ ವ್ಯವಸ್ಥಾಪಕ ಡಾ| ರಾಮಕೃಷ್ಣ ಭಟ್, ತಾ.ಪಂ.ಸದಸ್ಯೆ ಜಯಂತಿ ಆರ್.ಗೌಡ, ಕೊಯಿಲ ಗ್ರಾ.ಪಂ. ಅಧ್ಯಕ್ಷೆ ಹೇಮಾ ಎಮ್ ಶೆಟ್ಟಿ, ವಳಕಡಮ ಹಾ.ಉ.ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಕುಸುಮಾವತಿ ಧನಂಜಯ, ಉಪಾಧ್ಯಕ್ಷೆ ಮಮತ ವಿನೋಧರ ಮಾಳ, ನಿರ್ದೇಶಕರುಗಳಾದ ಮೋಹಿನಿ ಜೆ, ದೇವಕಿ ನೋಣಯ್ಯ ಗೌಡ, ಪದ್ಮಾವತಿ ಸಂಜೀವ, ವಸಂತಿ ಯತೀಂದ್ರ, ಶಾರಾದ ಹುಕ್ರಪ್ಪ, ಉಮಾವತಿ ಶೀನಪ್ಪ, ದಮಯಂತಿ ಕರುಣಾಕರ, ಶೈನಿ ಸ್ಟೀಪನ್, ಲತಾ ನವೀನ, ಹೇಮಾ ಬಾಳಪ್ಪ ಮುಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group