ಸ್ಟ್ರೋಕ್ (ಪಾಶ್ರ್ವವಾಯು)

(ನ್ಯೂಸ್ ಕಡಬ) newskadaba.com  .29  ಜಗತ್ತಿನಲ್ಲಿ ಅಂಗವೈಕಲ್ಯಕ್ಕೆ ಕಾರಣವಾಗಿರುವ ಎರಡನೇ ಅತೀ ದೊಡ್ಡ ಕಾರಣ ಎಂದರೆ ಮೆದುಳಿಗೆ ಸಂಬಂಧಪಟ್ಟ ಸ್ಟ್ರೋಕ್ ಅಥವಾ ಮೆದುಳಿನ ಆಘಾತ. ಪ್ರತಿ ವರ್ಷ 15 ಮಿಲಿಯನ್ ಮಂದಿ ಈ ಸ್ಟ್ರೋಕ್ ಖಾಯಿಲೆಗೆ ತುತ್ತಾಗುತ್ತಾರೆ ಇದರ ಮೂರನೇ ಒಂದಂಶದಷ್ಟು ಜನ ಸತ್ತರೆ ಇನ್ನುಳಿದ ಮೂರನೇ ಒಂದಂಶದಷ್ಟು ಜನ ಶಾಶ್ವತವಾಗಿ ಅಂಗ ವೈಕಲ್ಯಕ್ಕೆ ತುತ್ತಾಗುತ್ತಾರೆ. ಉಳಿದ ಮೂರನೇ ಒಂದಂಶದಷ್ಟು ಜನರಿಗೆ ಮಾತ್ರ ಸೂಕ್ತ ಚಿಕಿತ್ಸೆ ದೊರಕಿ ಮೊದಲಿನಂತಾಗುವ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಈ ಖಾಯಿಲೆ ಕಾಣಸಿಕೊಳ್ಳಬಹುದಾದರೂ, ಸಾಮಾನ್ಯವಾಗಿ 60 ವರ್ಷದ ನಂತರವೇ ಹೆಚ್ಚಾಗಿ ಕಾಣಸಿಗುತ್ತದೆ. ಮೆದುಳಿಗೆ ಯಾವುದಾದರೊಂದು ಭಾಗಕ್ಕೆ ರಕ್ತಸಂಚಾರ ನಿಂತು ಹೋಗಿ ಆ ಭಾಗದ ಮೆದುಳು ನಿರ್ಜೀವವಾಗುತ್ತದೆ ಮತ್ತು ಆ ಭಾಗದಿಂದ ನಿಯಂತ್ರಿಸಲ್ಪಡುವ ಕೆಲಸಗಳು ನಿಷ್ಕ್ರಿಯವಾಗುತ್ತದೆ. ಇದನ್ನೇ ಮೆದುಳಿನ ಆಘಾತ ಅಥಾವ ಸ್ಟ್ರೋಕ್ ಎನ್ನುತ್ತಾರೆ. ಎರಡು ರೀತಿಯ ಸ್ಟ್ರೋಕ್ ಇದ್ದು ಮೆದುಳಿನ ರಕ್ತನಾಳಗಳು ಒಡೆದುಕೊಂಡು ಮೆದುಳಿನ ಜೀವಕೋಶಗಳು ನಿರ್ಜೀವವಾಗುತ್ತದೆ. ಇದನ್ನು ಹಿಮೋರೇಜಿಕ್ ಸ್ಟ್ರೋಕ್ ಎನ್ನುತ್ತಾರೆ. ಇನ್ನೊಂದನ್ನು ಇಷ್ಕೆಮಿಕ್ ಸ್ಟ್ರೋಕ್ ಎನ್ನುತ್ತಾರೆ. ಇದರಲ್ಲಿ ರಕ್ತನಾಳಗಳ ಒಳಗೆ ರಕ್ತಹೆಪ್ಪುಗಟ್ಟಿಕೊಂಡು ರಕ್ತನಾಳಗಳಲ್ಲಿ ರಕ್ತ ಪರಿಚಲನೆಗೆ ಅಡ್ಡಿಯಾಗಿ, ಆ ಭಾಗದ ಮೆದುಳಿನ ಜೀವಕೋಶಗಳು ಸಾಯುತ್ತದೆ. ಇದು ಅತೀ ಸಾಮಾನ್ಯ ಮತ್ತು ಹೆಚ್ಚಾಗಿ ಕಾಣಸಿಗುವ ರೋಗವಾಗಿರುತ್ತದೆ.

ಸ್ಟ್ರೋಕ್ ಯಾರಿಗೆ ಬರಬಹುದು? :- 12 ಕಾರಣಗಳು
1. ಆಲ್ಕೋಹಾಲ್, ಸಿಗರೇಟ್ ಸೇವನೆ ಮಾದಕದ್ರವ್ಯ ಸೇವನೆ ಇರುವವರಿಗೆ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
2. ಮಧುಮೇಹ ರೋಗಿಗಳು.
3. ರಕ್ತದಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುವವರಿಗೆ.
4. ಅಧಿಕ ರಕ್ತದೊತ್ತಡ ಇರುವವರಿಗೆ.
5. ವಂಶ ಪಾರಂಪರ್ಯವಾಗಿ ವಂಶವಾಹಿನಿಗಳಲ್ಲಿಯೂ ಬರುವ ಸಾಧ್ಯತೆ ಇರುತ್ತದೆ.
6. ಹೃದಯ ಸಂಬಂಧಿ ಖಾಯಿಲೆಗಳು ಮತ್ತು ಪೆಡಸುಗೊಂಡ ರಕ್ತನಾಳ ಇರುವವರಿಗೆ.
7. ಸ್ಥೂಲಕಾಯ, ಬೊಜ್ಜು ಜಾಸ್ತಿ ಇರುವವರಿಗೆ ಮತ್ತು ವಿಲಾಸಿ ಜೀವನಶೈಲಿ ಇರುವವರಿಗೆ.
8. ದುಡಿಮೆ ಇಲ್ಲದ, ದೈಹಿಕ ಶ್ರಮವಿಲ್ಲದ ಜೀವನಕ್ರಮ.
9. ಅತಿಯಾದ ಮಾನಸಿಕ ಒತ್ತಡ, ಮಾನಸಿಕ ವ್ಯಥೆ ಮತ್ತು ಮಾನಸಿಕ ವ್ಯಾದಿ.
10. ಕುಡುಗೋಲು ಕಣ ಖಾಯಿಲೆ ಇರುವವರಿಗೆ.
11. ಅತಿಯಾದ ನೋವು ನಿವಾರಕಗಳ ಸೇವನೆ (ಬ್ರೂಪೇನ್ ಮಾತ್ರೆ).
12. ಸಮತೋಲನ ಇರುವ ಆಹಾರ ಸೇವನೆ ಮಾಡದಿರುವುದು, ಅತಿಯಾದ ಜಂಕ್ ಆಹಾರ ಸೇವನೆ ಮತ್ತು ಕೊಬ್ಬು ಮತ್ತು ಕರಿದ ಪದಾರ್ಥಗಳ ಸೇವನೆ.


ಸ್ಟ್ರೋಕ್‍ನ ಲಕ್ಷಣಗಳು : 12 ಲಕ್ಷಣಗಳು :-
1. ಮುಖದ ಒಂದು ಭಾಗದಲ್ಲಿ ನೋವು, ಕೈ, ಕಾಲು, ಎದೆ ಭಾಗದಲ್ಲಿ ನೋವು ಇರಬಹುದು.
2. ಕಣ್ಣು ಮಂಜಾಗುವುದು, ವಸ್ತುಗಳು ಎರಡೆರಡಾಗಿ ಕಾಣುವುದು.
3. ಉಸಿರಾಡಲು ಕಷ್ಟವಾಗುವುದು, ನುಂಗಲು ಕಷ್ಟವಾಗುವುದು.
4. ವಾಂತಿ, ವಾಕರಿಕೆ ಬಂದಂತಾಗುವುದು, ತಲೆ ತಿರುಗಿದಂತೆ ಭಾಸವಾಗುವುದು.
5. ಮೈಯಲ್ಲಿ ನಡುಕ.
6. ದೇಹದ ಸಮತೋಲನ ತಪ್ಪುವುದು, ಕೈಕಾಲುಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು, ಕಣ್ಣು ಕತ್ತಲು ಬರುವುದು.
7. ನಡೆದಾಡಲು ಕಷ್ಟವಾಗುವುದು, ಕೈಕಾಲುಗಳು ಮರಗಟ್ಟಿದಂತೆ ಭಾಸವಾಗಬಹುದು.
8. ಮುಖ ಸೊಟ್ಟಗಾಗುವುದು, ಮುಖದಲ್ಲಿನ ಸ್ನಾಯುಗಳ ಮೇಲಿನ ನಿಯಂತ್ರಣ ತಪ್ಪುತ್ತದೆ. ಒಂದು ಭಾಗದ ಮುಖದಲ್ಲಿ ಸ್ನಾಯುಗಳ ನಿಯಂತ್ರಣ ಕಳೆದುಕೊಂಡು ಸೊಟ್ಟಗಾಗುತ್ತದೆ. ಕೈಕಾಲುಗಳ ನಿಯಂತ್ರಣವೂ ತಪ್ಪುತ್ತದೆ. ಎರಡು ಕೈಗಳನ್ನು ತಲೆಯ ಮೇಲೆ ಎತ್ತಲು ಹೇಳಿದಾಗ ಎರಡು ಕೈಗಳನ್ನು ಎತ್ತಲು ಕಷ್ಟವಾಗಬಹುದು. ಅದೇ ರೀತಿ ನಗಲು ಸಾಧ್ಯವಾಗುವುದಿಲ್ಲ.
9. ತಲೆನೋವು, ಕೆಲವೊಮ್ಮೆ ಕಾರಣವಿಲ್ಲದೆ ಅತಿಯಾದ ತಲೆನೋವು ಬರಬಹುದು.
10. ಏನಾದರೂ ಕೆಲಸದ ಮಧ್ಯದಲ್ಲಿರುವಾಗ ಎಲ್ಲಾ ಆಲೋಚನೆಗಳು ನಿಷ್ಕ್ರಿಯವಾಗಿ ಏನೂ ತೊಚದಂತಾಗುವುದು, ಯೋಚನಾಶಕ್ತಿ ಕಳೆದುಕೊಳ್ಳುವುದು.
11. ಮಾತಾನಾಡಲು ಕಷ್ಟವಾಗುವುದು, ತೊದಲುವುದು ಇತ್ಯಾದಿ.
12. ಅತಿಯಾದ ಸುಸ್ತು ಆಯಾಸ ಮತ್ತು ಭ್ರಾಂತಿಗಳಾಗುವುದು.

Also Read  ಸುಳ್ಯ: ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆ ➤ ನ.22 ರಂದು ಮಾಜಿ ಅಡ್ವೊಕೇಟ್ ಜನರಲ್ ಶ್ರೀ ಎ.ಎಸ್.ಪೊನ್ನಣ್ಣರವರು ಭೇಟಿ

ಗುರುತಿಸುವುದು ಹೇಗೆ? :-
FAST  ಎಂಬ ಶಬ್ದದ ಮುಖಾಂತರ ಸ್ಟ್ರೋಕ್‍ನ್ನು ಗುರುತಿಸಲಾಗುತ್ತದೆ ಮತ್ತು ತಕ್ಷಣವೇ ಸ್ಪಂದಿಸಲಾಗುತ್ತದೆ.
F (FACE)  ಅಂದರೆ ಮುಖದಲ್ಲಿನ ನಗಲು ಸಾಧ್ಯವಾಗದಿರುವುದು.
A (ARMS) ಅಂದರೆ ಎರಡೂ ಕೈಗಳನ್ನು ಮೇಲೆತ್ತಲು ಸಾಧ್ಯವಾಗದಿರುವುದು.
S (SPEECH) ಅಂದರೆ ಮಾತನಾಡಲು ಕಷ್ಟವಾಗಿ ತೊದಲುವುದು.
T (TIME) ಕಾಲಹರಣ ಮಾಡದೇ ಕೂಡಲೇ ಆಸ್ಪತ್ರೆಗೆ ಧಾವಿಸಿ.

Also Read  ವಿಮಾನಕ್ಕೆ ಬಾಂಬ್ ಬೆದರಿಕೆ…! ➤ ಸೇನಾ ವಾಯುನೆಲೆಯಲ್ಲಿ ತುರ್ತು ಭೂಸ್ಪರ್ಶ


ತಡೆಗಟ್ಟುವುದು ಹೇಗೆ?
ಶೇಕಡಾ 80ರಷ್ಟು ಮೆದುಳಿನ ಅಘಾತವನ್ನು ಸಾಕಷ್ಟು ಮುಂಜಾಗೂರುಕತೆ ವಹಿಸಿ ತಡೆಗಟ್ಟಬಹುದು.
1. ಜೀವನ ಶೈಲಿ ಬದಲಾಯಿಸಿ, ಮದ್ಯಪಾನ ಧೂಮಪಾನ ತ್ಯಜಸಬೇಕು ಮಾದಕ ದ್ರವ್ಯವನ್ನು ಬಿಟ್ಟುಬಿಡಿ.
2. ವ್ಯಾಯಾಮ, ದೈಹಿಕ ಕಸರತ್ತು ಇರುವ ಜೀವನಶೈಲಿ ಅಳವಡಿಸಿ, ಸೋಮಾರಿ ಜೀವನಶೈಲಿ ಬಿಡಿ. ವಿಲಾಸಿ ಜೀವನಕ್ರಮಕ್ಕೆ ತಿಲಾಂಜಲಿ ಇಡಬೇಕು.
3. ಕೊಬ್ಬು ರಹಿತ ಆಹಾರ, ಕರಿದ ಪದಾರ್ಥಗಳನ್ನು ತ್ಯಜಿಸಿ ಕಾಳು ಧಾನ್ಯಗಳಿರುವ ಹಸಿ ತರಕಾರಿ, ಹಣ್ಣು ಹಂಪಲು ಜಾಸ್ತಿ ತಿನ್ನಬೇಕು.
4. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬೇಕು.
5. ಅತಿಯಾದ ಬೊಜ್ಜು ಸ್ಥೂಲಕಾಯ ಇರಲೇಬಾರದು.  ದೇಹದ ತೂಕದ ಮಾಪನ 25ಕ್ಕಿಂತ ಕಡಿಮೆ ಇರಬೇಕು.
6. ಮಧುಮೇಹ ನಿಯಂತ್ರಣ ಮಾಡಬೇಕು.
7. ದಿನಕ್ಕೆ ಅರ್ಧ ಘಂಟೆ ಬಿರುಸು ನಡಿಗೆ ಮತ್ತು ದೈಹಿಕ ಕಸರತ್ತು ಮಾಡಬೇಕು.

ಮೆದುಳಿನ ಆಘಾತ ಬಹಳ ಸುಲಭವಾಗಿ ಗುರುತಿಸಬಹುದಾದ ಖಾಯಿಲೆ. ಯಾವತ್ತೂ ಮುನ್ಸೂಚನೆ ಇಲ್ಲದೆ ಈ ರೋಗ ಬರುವುದೇ ಇಲ್ಲ. ತಕ್ಷಣವೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ 80% ಮಂದಿಗೆ ಮೊದಲಿನಂತೆ ಜೀವನ ನಡೆಸಬಹುದು. ಅತಿ ಸುಲಭವಾಗಿ ಗುರುತಿಸಬಹುದಾದ ಮತ್ತು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುವ ರೋಗ ಇದಾಗಿರುವುದರಿಂದ ತಕ್ಷಣವೇ ಗುರುತಿಸಿ ಚಿಕಿತ್ಸೆ ಪಡೆಯುವುದರಲ್ಲಿಯೇ ಜಾಣತನ ಅಡಗಿದೆ.

Also Read  ನಾಳೆ 28 ಶಾಸಕರು ಸಚಿವರಾಗಿ ಪದಗ್ರಹಣ

ಡಾ|| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top