ಅಬ್ಬರಿಸಿದ ಆಷಾಡ ಮಳೆ ➤ ದುಮ್ಮಿಕ್ಕಿ ಹರಿಯುತ್ತಿರುವ ಕುಮಾರಧಾರ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.7.ಕಡಬ ಭಾಗದಲ್ಲಿ ಮಳೆಗಾಲ ಪ್ರಾರಂಭವಾಗಿದ್ದರೂ ಕಳೆದ ಭಾನುವಾರ ತನಕ ಮಳೆಯ ಆರ್ಭಟ ಕಂಡು ಬಂದಿರಲಿಲ್ಲ, ಆದರೆ ಭಾನುವಾರ ರಾತ್ರಿಯಿಂದ ಆಷಾಡ ಮಳೆ ಅಬ್ಬರಿಸುತ್ತಿದ್ದು, ಹಳ್ಳಕೊಳ್ಳ ತುಂಬಿ ಹರಿಯುತ್ತಿದೆ, ಜೀವನದಿ ಕುಮಾರಧಾರ ಸೋಮವಾರ ದುಮ್ಮಿಕ್ಕಿ ಹರಿಯಲಾರಂಭಿಸಿದೆ.


ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಜುಲೈ ತಿಂಗಳ ಅಂತ್ಯದವರೆಗೂ ನಿರೀಕ್ಷಿತ ಮಳೆಯಾಗಿರಲಿಲ್ಲ. ಈ ವರ್ಷ ಮಳೆಯ ಪ್ರಮಾಣ ತುಂಬಾ ಕಡಿಮೆ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಪೂರಕವೆಂಬಂತೆ ಸರಿಸುಮಾರು ಅರ್ಧ ಮಳೆಗಾಲ ಕಳೆದರೂ ನದಿ, ಹೊಳೆ, ತೋಡುಗಳು ತಂಬಿಹರಿಯುವಷ್ಟು ಮಳೆಯಾಗಿರುಲಿಲ್ಲ. ಮಳೆಗಾಲದ ಕೃಷಿ ಚಟುವಟಿಕೆಗಳು ಬೇಸಾಯ ಕಾರ್ಯಗಳು ಬಿರುಸುಗೊಂಡಿರಲಿಲ್ಲ. ಅದಕ್ಕೂ ನೀರಿನ ಅಭಾವ ಕಂಡು ಬಂದಿತ್ತು.

ಕೆರೆ, ಬಾವಿಗಳಲ್ಲಿ ನೀರು ತುಂಬಿ ಹರಿಯಬೇಕಿದ್ದ ಸಮಯದಲ್ಲಿ ಮಳೆಯ ಕೊರತೆಯಿಂದ ಬರಿದಾಗಿ ಕಾಣುತ್ತಿದ್ದವು. ಇದೀಗ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಮಳೆ ತನ್ನ ಪ್ರಭಾವವನ್ನು ತೋರಿಸಲಾರಂಬಿಸಿದೆ. ಭಾನುವಾರದಿಂದ ಮಳೆಯ ಪ್ರಮಾಣ ನಿಧಾನವಾಗಿ ಏರತೊಡಗಿದೆ, ಅಂದು ಶುರುವಿಟ್ಟಕೊಂಡ ಮಳೆ ಮಂಗಳವಾರದ ತನಕವೂ ಅಬ್ಬರಿಸುತ್ತಿದೆ. ಸೋಮವಾರ ರಾತ್ರಿ ಈ ಭಾಗದಲ್ಲಿ ಈ ವರ್ಷದ ಅರಂಭಿಕ ಅತ್ಯಧಿಕ ಮಳೆಯಾಗಿದೆ, ಅದು ಮುಂದುವರಿದು ಮಂಗಳವಾರ ಸಂಜೆಯ ತನಕವೂ ಎಡಬಿಡದ ಮಳೆಯಾಗುತ್ತಿದೆ. ಆಗಾಗ ಗುಡುಗು ಸಹಿತ ವರುಣ ತನ್ನ ಕೃಪೆ ತೋರಿಸುತ್ತಿದ್ದಾನೆ.

Also Read  ವಿಟ್ಲ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ

ಅಂತು ಈ ವರ್ಷದ ಮಳೆಯ ಪ್ರಮಾಣದ ಕೊಡುಗೆಯನ್ನು ಪೃಕೃತಿ ನೀಡಲಾರಂಭಿಸಿದ್ದು, ಬರುವ ಬೇಸಿಗೆಯಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳಲಿದೆ ಎನ್ನುವ ಆತಂಕ ದೂರವಾಗುತ್ತಿದೆ. ಜಿಲ್ಲೆಯ ಜೀವನದಿ ಕುಮಾರಧಾರ ಸೋಮವಾರದಿಂದ ಮೈದುಂಬಿ ಹರಿಯಲಾರಂಭಿಸಿದೆ, ಭಾರೀ ಪ್ರಮಾಣದಲ್ಲಿ ನೀರಿನ ಮಟ್ಟ ಏರದಿದ್ದರೂ, ಈ ವರ್ಷದ ಈವರೆಗಿನ ಮಟ್ಟಿಗೆ ಅತ್ಯಧಿಕ ಎಂದು ಕಾಣಲಾರಂಬಿಸಿದೆ. ಸುಬ್ರಹ್ಮಣ್ಯದಿಂದ ಹಿಡಿದು ಉಪ್ಪಿನಂಗಡಿ ತನಕ ನದಿಯ ಇಕ್ಕೆಳೆಗಳಲ್ಲಿರುವ ಕೃಷಿ ತೋಟಗಳು ನೀರಿನಿಂದ ಆವೃತವಾಗಲು ಪ್ರಾರಂಭವಾಗಿದೆ, ನದಿಯಲ್ಲಿ ಬೆಳಿಗ್ಗೆ ಒಮ್ಮೆ ನೆರೆ ನೀರಿನ ಪ್ರಮಾಣ ಇಳಿಮುಖವಾಗಿ ಕಂಡು ಬಂದರೂ ಸಂಜೆಯ ವೇಳೆಗೆ ಅಧಿಕವಾಗಿ ನದಿ ತಂಬಿ ಹರಿಯುವಂತಾಗಿದೆ.

ಕಡಬ ತಾಲೂಕಿನ ಸವಣೂರು, ಕಾಣಿಯೂರು, ಬೆಳಂದೂರು, ನೂಜಿಬಾಳ್ತಿಲ, ಬಿಳಿನೆಲೆ, ಕೊಂಬಾರು, ಆಲಂಕಾರು, ಕೊೈಲ ಮುಂತಾದೆಡೆ ಮಳೆಯ ಪ್ರಮಾಣ ಅಧಿಕವಾಗಿ ಕಾಣಿಸಿಕೊಂಡಿದ್ದು ವಿದ್ಯುತ್ ಸರಬರಾಜಿನಲ್ಲಿ ಭಾರೀ ವ್ಯತ್ಯಯ ಕಂಡು ಬಂದಿದೆ. ಸೋಮವಾರ ರಾತ್ರಿ ವಿದ್ಯುತ್ ಸಂಪರ್ಕ ಕಡಿದುಕೊಂಡು ಮಂಗಳವಾರ ಸಂಜೆಯವರೆಗೂ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದಿದೆ.ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಹೊಸಮಠದಲ್ಲಿನ ಹಳೆಯ ಸೇತುವೆ ಎಂದಿನಂತೆ ಮುಳುಗಡೆಯಾಗುವಷ್ಟು ನೀರು ಗುಂಡ್ಯ ಹೊಳೆಯಲ್ಲಿ ಹರಿಯುತ್ತಿದೆ. ಘಾಟಿತಪ್ಪಲಿನಲ್ಲಿ ನಿರಂತರ ಸುರಿಯುವ ಕುಂಭದ್ರೋಣ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿ ಕಾಣಿಸಿಕೊಂಡಿದೆ, ಹೊಸಮಠದಲ್ಲಿ ಹಲವು ವರ್ಷಗಳ ಬೇಡಿಕೆ ನೂತನ ಸೇತುವೆ ನಿರ್ಮಾಣವಾಗಿರುವುದರಿಂದ ಜನರಿಗೆ ಮುಳುಗಡೆ ಭೀತಿ ದೂರವಾಗಿದೆ.

Also Read  ಪುತ್ತೂರು: ಚಿರತೆ ಪ್ರತ್ಯಕ್ಷ..!

ಇಲ್ಲಿನ ಹಳೆಯ ಸೇತುವೆಯನ್ನು ಜನ ಬಳಕೆ ಮಾಡದಂತೆ ಸಂಭಧಪಟ್ಟ ಇಲಾಖೆ ಈಗಾಗಲೇ ಕಟ್ಟಪ್ಪಣ ಹೊರಡಿಸಿರುವುದರಿಂದ ಹಾಗೂ ಪೂರ್ವ ಭಾಗದಲ್ಲಿ ರಸ್ತೆಯನ್ನು ಮಣ್ಣು ತುಂಬಿ ಮುಚ್ಚಿರುವುದರಿಂದ ವಾಹನ ಸಂಚಾರ ಸಂಪೂರ್ಣ ನಿಷೇಧವಾಗಿದೆ. ಆದ್ದರಿಂದ ಈ ವರ್ಷದಿಂದ ಇಲ್ಲಿ ಮುಳಗಡೆ ಭೀತಿ ಇಲ್ಲವಾಗಿದೆ. ಬಿಳನೆಲೆ ಸಮೀಪದ ನೆಟ್ಟಣ ದಲ್ಲಿ ಕೂಡಾ ನೂತನ ಸೇತುವೆ ನಿರ್ಮಾಣವಾಗಿದ್ದು, ಸಣ್ಣ ಮಳೆ ಬಂದರೂ ಇಲ್ಲಿನ ಮುಳುಗು ಸೇತುವೆ ಮುಳುಗಡೆಯಾಗಿ ಸಂಚಿಕಾರ ಒಡ್ಡುತ್ತಿತ್ತು, ಇದೀಗ ಈ ಮುಳುಗು ಸೇತುವೆ ಇತಿಹಾಸದ ಪುಟ ಸೇರಿದೆ. ಇಲ್ಲಿ ಕೂಡಾ ಎಷ್ಟೇ ಮಳೆ ಬಂದರೂ ನೂತನ ಸೇತುವೆ ಮುಳಗಡೆ ಪ್ರಸಂಗ ಬಂದೊದಗುವುದಿಲ್ಲ. ಈ ಹಿನ್ನೆಯಲ್ಲಿ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ವಾಹ ಸಂಚಾರಕ್ಕೆ ಸೇತುವೆಗಳ ಮುಳಗಡೆಯ ಸಂಚಿಕಾರ ಇಲ್ಲದಂತಾಗಿದೆ. ಮಂಗಳವಾರ ಶಾಲಾ ಕಾಲೇಜುಗಳಿಗೆ ಮುಂಜಾಗೃತವಾಗಿ ರಜೆ ಇದ್ದುದರಿಂದ ವಿದ್ಯಾರ್ಥಿಗಳು ಮಳೆಯಿಂದ ಪರದಾಡುವ ಪ್ರಮೇಯ ಇರಲಿಲ್ಲ.

error: Content is protected !!
Scroll to Top