ಶೌಚಾಲಯರಹಿತ ಮನೆಗಳ ಸಮೀಕ್ಷೆ ಮಾಡಿ ➤ಮೀನಾಕ್ಷಿ ಶಾಂತಿಗೋಡು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಗ್ರಾಮ ಪಂಚಾಯತ್ ಮಟ್ಟದಲ್ಲಿ ಶೌಚಾಲಯ ರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ದಾಖಲೆ ಇದ್ದು ಶೌಚಾಲಯ ಇಲ್ಲದಿರುವ ಹಾಗೂ ದಾಖಲೆ ಇಲ್ಲದೆ ಶೌಚಾಲಯ ಇಲ್ಲದಿರುವ ನೈಜ ಮಾಹಿತಿಯನ್ನು ಜುಲೈ 10 ರೊಳಗೆ ಜಿಲ್ಲಾ ಪಂಚಾಯತ್‍ಗೆ ನೀಡಬೇಕು ಎಂದು ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಅಧಿಕಾರಿಗಳಿಗೆ ಸೂಚಿಸಿದರು.


ಅವರಿಂದು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಸ್ವಚ್ಛ ಭಾರತ್ ಮಿಷನ್ , ಜಿಲ್ಲಾ ನೆರವು ಘಟಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು,ಕಸ ವಿಲೇವಾರಿ ಘಟಕ ಆದ ನಂತರವೂ ಕೆಲವೊಂದು ಕಡೆ ರಸ್ತೆ ಬದಿಗಳಲ್ಲಿ ಕಸದ ರಾಶಿ ಕಾಣಸಿಗುತ್ತಿದೆ. ಕಸ ವಿಲೇವಾರಿ ಘಟಕ ನಿರ್ವಹಣೆಯಲ್ಲಿ ಆಯಾ ಗ್ರಾಮ ಪಂಚಾಯತ್‍ನಲ್ಲೆ ಸಮಿತಿ ರಚಿಸಿ ಅವರೂ ಜವಾಬ್ದಾರಿ ತೆಗೆದುಕೊಳ್ಳಬೇಕು.

ಗ್ರಾಮ ಪಂಚಾಯತ್ ವತಿಯಿಂದ ಬಟ್ಟೆ ಚೀಲದ ಅಂಗಡಿ ಪ್ರಾರಂಭಿಸುವ ನಿರ್ಣಯ ತೆಗೆದುಕೊಂಡು, ಪ್ಲಾಸ್ಟಿಕ್ ಯಾವ ಅಂಗಡಿಯಲ್ಲಿ ಬಳಸುತ್ತಾರೋ, ಆ ಅಂಗಡಿ ಮಾಲೀಕನಿಗೆ ಅಥವಾ ಬಳಸುವ ವ್ಯಕ್ತಿಗೆ ದಂಡ ವಿಧಿಸಬೇಕು ದಕ್ಷಿಣ ಕನ್ನಡ ಜಿಲ್ಲೆ ಮಾದರಿ ಜಿಲ್ಲೆಯಾಗಬೇಕಾದರೇ ಅಧಿಕಾರಿಗಳ ಜೊತೆಗೆ ಜನತೆಯೂ ಸಹಕಾರ ನೀಡಬೇಕು ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಆರ್ ಸೆಲ್ವಮಣಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಜೂನ್ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಕಸ ವಿಲೇವಾರಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದರು.

ಕಸ ವಿಲೇವಾರಿ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲದ ಕೆಲ ಸ್ಥಳಗಳಲ್ಲಿ ಪ್ಲಾಸ್ಟಿಕ್ ಸುಡುವುದು ಕಂಡುಬರುತ್ತಿದೆ ಇದರಿಂದ ಆರೋಗ್ಯದ ಮೇಲೆ ಉಂಟಾಗುವಂತಹ ಪರಿಣಾಮಗಳನ್ನು ತಿಳಿಸುವುದರ ಜೊತೆಯಲ್ಲಿ ಗ್ರಾಮ ಪಂಚಾಯತ್ ಜನಜಾಗೃತಿ ಕಾರ್ಯಕ್ರಮ ನಡೆಸಿ, ಕಟ್ಟಡ, ಹೋಟೆಲ್, ಬಾರ್ ಇನ್ನಿತರ ಕೈಗಾರಿಕ ಕೇಂದ್ರಗಳ ಪಟ್ಟಿ ಮಾಡಿ ಜಿಲ್ಲಾ ಪಂಚಾಯತ್‍ಗೆ ಒಂದು ವಾರದೊಳಗೆ ನಿಖರವಾದ ಮಾಹಿತಿ ನೀಡಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ ಇಬ್ರಾಹಿಂ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group