ಮುಂಗಾರು ಹಂಗಾಮಿನ ಬೀಜೋಪಚಾರ ಬಳಕೆಯ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ

 (ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂನ್.14.ಬೆಳ್ತಂಗಡಿ ತಾಲೂಕಿನ ಕೃಷಿ ಇಲಾಖೆಯ ವತಿಯಿಂದ 2019-20 ನೇ ಸಾಲಿನ ಮುಂಗಾರು ಹಂಗಾಮು ಬೀಜೋಪಚಾರ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆಯ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಸುಲ್ಕೇರಿಯ ವೇಣೂರು ರೈತ ಸಂಪರ್ಕ ಕೇಂದ್ರದಲ್ಲಿ ಜೂನ್ 10 ರಂದು ಹಮ್ಮಿಕೊಳ್ಳಲಾಗಿತ್ತು.

ಸೂಕ್ತವಾದ ವೈಜ್ಞಾನಿಕ ಸಲಹೆ ಮತ್ತು ರೈತರು ಮುಂಗಾರಿನ ಸಮಯದಲ್ಲಿ ಕೈಗೊಳ್ಳಬಹುದಾದ ಕೃಷಿ ಪದ್ದತಿಗಳ ಬಗ್ಗೆ ಜಾಗರೂಕತೆಯನ್ನು ಅನುಸರಿಸುವುದು ಅತೀ ಮುಖ್ಯವಾದ ಅಂಶವೆಂಬುದನ್ನು ಅರಿತು ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕ ಮತ್ತು ಬೇಸಾಯ ಶಾಸ್ತ್ರದ ವಿಜ್ಞಾನಿ ಹರೀಶ್ ಶಣೈ ರವರು ವಿಜ್ಞಾನಿಗಳ ಕ್ಷೇತ್ರದ ಭೇಟಿಗೆ ಪ್ರೋತ್ಸಾಹಿಸಿದರು.ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಪರೀಕ್ಷಾ ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್. ಮತ್ತು ಕೇಂದ್ರದ ಕ್ಷೇತ್ರ ನಿರ್ವಾಹಕ ಡಾ. ಪುನೀತ್‍ರಾಜ್ ಎಂ.ಎಸ್. ರವರು ಸುರಕ್ಷಿತ ಪೀಡೆನಾಶಕ / ಕೀಟನಾಶಕಗಳ ಬಳಕೆ ಮತ್ತು ಬೀಜೋಪಚಾರಗಳ ಬಗ್ಗೆ ಮಾಹಿತಿ ನೀಡಿದರು.

ಸಮಗ್ರ ಪೀಡೆ ನಿರ್ವಹಣೆಗಾಗಿ ಕೇವಲ ರಾಸಾಯನಿಕಗಳನ್ನು ಬಳಸದೆ ಕೆಲವು ಸೂಕ್ತ ಬೇಸಾಯ, ಯಾಂತ್ರಿಕ ಕ್ರಮಗಳು ಮತ್ತು ಜೈವೀಕ ಮಾರ್ಗಗಳ ಮೂಲಕ ಪೀಡೆಗಳನ್ನು ಹತೋಟಿಯಲ್ಲಿಡಬಹುದೆಂದು ಸಲಹೆ ನೀಡಿದರು. ರಾಸಾಯನಿಕ ಪೀಡೆನಾಶಕಗಳ ಬಳಕೆಯ ಮುನ್ನ ಕೈಗೊಳ್ಳಬಹುದಾದ ಸುರಕ್ಷಿತ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಭತ್ತ ಹಾಗೂ ಇತರೆ ತರಕಾರಿ ಬೆಳೆಗಳ ಬೀಜೋಪಚಾರದ ಮಹತ್ವದಿಂದ ರೋಗ ಮತ್ತು ಕೀಟಗಳ ಭಾದೆಯನ್ನು ತಡೆದು ಬೀಜಗಳ ಮೊಳಕೆಯ ಪ್ರಮಾಣ ಮತ್ತು ಇಳುವರಿ ಹೆಚ್ಚಿಸುವ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಕೃಷಿ ಅಧಿಕಾರಿ ಚಿದಾನಂದ ಹೂಗಾರ ವಹಿಸಿದ್ದರು, ಪ್ರಗತಿಪರ ರೈತರಾದ ಪ್ರಭಾಕರ ಮಯ್ಯ ಉಪಸ್ಥಿತರಿದ್ದರು.

Also Read  ಧಗಧಗನೆ ಹೊತ್ತಿ ಉರಿದ ಕಾರು !

error: Content is protected !!
Scroll to Top