ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ➤ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.8.ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಪಡೆಯಲು ನಿಗದಿಪಡಿಸಿದ ಕೊನೆಯ ದಿನ ಜುಲೈ 3 ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಕೊನೆಯ ದಿನ ಜುಲೈ 12. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ವಿಶೇಷ ಸೂಚನೆ: ಕಳೆದ ಸಾಲಿನವರೆಗೆ ನಿಗಮದ ಗಂಗಾಕಲ್ಯಾಣ ಯೋಜನೆಯಡಿ 2017-18ರಿಂದ 2018-19 ರ ವರೆಗೆ ಸಲ್ಲಿಸಿರುವ ಅರ್ಜಿಗಳನ್ನು ಹೊರತುಪಡಿಸಿ ಅದಕ್ಕಿಂತಲೂ ಹಿಂದಿನ ಸಾಲುಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಹೊಂದಿರಬೇಕಾದ ಸಾಮಾನ್ಯ ಅರ್ಹತೆಗಳು: ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಮತ್ತು ಇದರ ಉಪ ಸಮುದಾಯಗಳು, ಉಪ್ಪಾರ ಮತ್ತು ಇದರ ಉಪ ಸಮುದಾಯಗಳು, ಅಂಬಿಗ ಮತ್ತು ಇದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ), ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.

ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿದಾರರು ಕೆ.ವೈ.ಸಿ. ಬಗ್ಗೆ ಆಧಾರ್ ಕಾರ್ಡ್/ಚುನವಣಾ ಗುರುತಿನ ಚೀಟಿ/ಪಾನ್ ಕಾರ್ಡ್ ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. (ಅರ್ಜಿದಾರರು ಐ.ಎಫ್.ಎಸ್.ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ಗ್ರಾಮೀಣ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರಬೇಕು.ರಾಜ್ಯ ಸರ್ಕಾರದ ಯೋಜನೆಗಳು: ಚೈತನ್ಯ ಸಹಾಯಧನ ಯೋಜನೆ – ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ ಅವಲಭಿಂತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ, ಕೈಗಾರಿಕೆ, ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ.25000/-ಗಳಿಂದ ರೂ.5.00ಲಕ್ಷಗಳವರೆಗೆ ಘಟಕಗಳಿಗೆ ಶೇ.20ರಷ್ಟು ಗರಿಷ್ಟ ರೂ.25000/-ಗಳ ಸಹಾಯಧನ ಮಂಜೂರು ಮಾಡಲಾಗುವುದು. ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲವಾಗಿರುತ್ತದೆ.

ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ – ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಚಟುವಟಿಕೆ ಅನುಸಾರ ಗರಿಷ್ಠ ರೂ.2,00,000/-ಗಳ ವರೆಗೆ ಆರ್ಥಿಕ ನೆರವು. ಇದರಲ್ಲಿ, ಗರಿಷ್ಠ ಶೇ.15ರಷ್ಟು ಸಹಾಯಧನ, ಉಳಿಕೆ ಮೊತ್ತ ವಾರ್ಷಿಕ ಶೇ4ರ ಬಡ್ಡಿದರದಲ್ಲಿ ಸಾಲ. ಕಿರುಸಾಲ ಯೋಜನೆಯಲ್ಲಿ ಸೌಲಭ್ಯ – ಸ್ವ ಸಹಾಯ ಗುಂಪುಗಳ ಸದಸ್ಯರು ಕೈಗೊಳ್ಳುವ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರದ ಚಟುವಟಿಕೆಗಳಿಗೆ ಅಂದರೆ, ಹಣ್ಣು, ತರಕಾರಿ ಮಾರುವವರು, ಹಾಲು ಮಾರುವವರು, ಹೂ ಮಾರುವವರು, ತಳ್ಳುವ ಗಾಡಿ ವ್ಯಾಪಾರಿಗಳು ಮುಂತಾದ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಿಗೆ ವಾರ್ಷಿಕ ಶೇಕಡ 4ರ ಬಡ್ಡಿ ದರದಲ್ಲಿ ಗರಿಷ್ಠ ರೂ.10,000/- ಸಾಲ ಹಾಗೂ ರೂ.5,000/-ಗಳ ಸಹಾಯಧನ. ಅರ್ಜಿದಾರರು ಬಿ.ಪಿ.ಎಲ್ ಕುಟುಂಬಕ್ಕೆ ಸೇರಿರಬೇಕು ಹಾಗೂ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ -ಹಿಂದುಳಿದ ವರ್ಗಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ಧಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವೃತ್ತಿ ಅನುಸಾರ ಗರಿಷ್ಠ ರೂ.2,00,000/-ಗಳ ವರೆಗೆ ಆರ್ಥಿಕ ನೆರವು. ಇದರಲ್ಲಿ, ಗರಿಷ್ಠ ಶೇ.15ರಷ್ಟು ಸಹಾಯಧನ, ಉಳಿಕೆ ಮೊತ್ತ ಶೇ.2 ರ ಬಡ್ಡಿದರದಲ್ಲಿ ಸಾಲ.ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆ – ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಗಳಾದ ಪೋಸ್ಟ್‍ಡಾಕ್ರ್ಟಲ್, ಪಿಹೆಚ್.ಡಿ., ಮಾಸ್ಟರ್ ಡಿಗ್ರಿ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ವಾರ್ಷಿಕ ರೂ.3.50ಲಕ್ಷಗಳಂತೆ, 03 ವರ್ಷಗಳ ಕೋರ್ಸ್‍ನ ಅವಧಿಗೆ, ಗರಿಷ್ಠ ರೂ.10.00ಲಕ್ಷಗಳ ಬಡ್ಡಿರಹಿತ ಸಾಲ ಸೌಲಭ್ಯ.

ಅಭ್ಯರ್ಥಿಗಳು ಗರಿಷ್ಠ 35 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ ವರಮಾನ ರೂ.3.50ಲಕ್ಷಗಳನ್ನು ಮೀರಿರಬಾರದು ಹಾಗೂ ಅರ್ಹತಾ ಪರೀಕ್ಷೆಗಳಲ್ಲಿ ಶೇ.60ಕ್ಕಿಂತ ಹೆಚ್ಚಿನ ಅಂಕಗಳಿಸಿರಬೇಕು.ಗಂಗಾ-ಕಲ್ಯಾಣ ನೀರಾವರಿ ಯೋಜನೆ – ವೈಯಕ್ತಿಕ ಕೊಳವೆಬಾವಿ ಯೋಜನೆ – ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‍ಸೆಟ್, ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚ ರೂ.2.50ಲಕ್ಷಗಳಲ್ಲಿ ರೂ.2.00ಲಕ್ಷಗಳ ಸಹಾಯಧನ ಹಾಗೂ ರೂ.50,000/-ಗಳ ಶೇ.4ರ ಬಡ್ಡಿದರದಲ್ಲಿ ಸಾಲ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾ||, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ.4.00ಲಕ್ಷಗಳು. ಈ ಮೊತ್ತದಲ್ಲಿ ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.50,000/-ಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವುದು. ಸಾಮೂಹಿಕ ನೀರಾವರಿ ಯೋಜನೆ – ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ಕನಿಷ್ಠ 3 ಜನರು ಹೊಂದಿರುವ 8 ರಿಂದ 15 ಎಕರೆ ಜಮೀನಿಗೆ ರೂ.4.00ಲಕ್ಷಗಳ ವೆಚ್ಚದಲ್ಲಿ 02 ಕೊಳವೆ ಬಾವಿ, 15 ಎಕರೆಗಿಂತ ಹೆಚ್ಚಿನ ಜಮೀನಿಗೆ ರೂ.6.00ಲಕ್ಷಗಳ ವೆಚ್ಚದಲ್ಲಿ 03 ಕೊಳವೆಬಾವಿ ಕೊರೆಯಿಸಿ ಪಂಪ್ ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ.

ವಿದ್ಯುದ್ದೀಕರಣಕ್ಕೆ ಪ್ರತಿ ಕೊಳವೆ ಬಾವಿಗೆ ರೂ.50,000/-ಗಳನ್ನು ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಲಾಗುವುದು. ಮಲೆನಾಡು ಪ್ರದೇಶಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚದಲ್ಲಿ ತೆರೆದ ಬಾವಿಗಳ ಮಂಜೂರು. ಭೂ ಮಟ್ಟದಲ್ಲಿ ದೊರೆಯುವ ನದಿ ಮತ್ತು ಜಲಾಶಯಗಳ ನೀರಾವರಿ ಸಂಪನ್ಮೂಲಗಳಿಂದ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ. ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಫಲಾಪೇಕ್ಷಿಗಳು, ಅವರು ವಾಸಿಸುತ್ತಿರುವ ಆಯಾ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಡಿ.ದೇವರಾಜ ಅರಸು ಭವನ, ರೇಡಿಯೋ ಪಾರ್ಕ್ ಬಳಿ, ಉರ್ವಸ್ಟೋರ್, ಮಂಗಳೂರು ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ಉಚಿತ ಅರ್ಜಿಗಳನ್ನು ಪಡೆಯಬಹುದು. ಜುಲೈ 12 ರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ ಸೈಟ್: :https://www.karnataka.gov.in/dbcdc ಸಂಪರ್ಕಿಸಬಹುದು.

error: Content is protected !!

Join the Group

Join WhatsApp Group