ಪೇರಡ್ಕ➤ರಸ್ತೆ ದುರಸ್ಥಿ ಕಾರ್ಯ ಪ್ರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ಪರದಾಡುವಂತಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕಾಯರಡ್ಕ-ಪೇರಡ್ಕ ರಸ್ತೆಯ ದುರಸ್ಥಿ ಕಾರ್ಯ ಪ್ರಾರಂಭಗೊಂಡಿದೆ. ಈ ರಸ್ತೆ ದುರಾವಸ್ಥೆ ಬಗ್ಗೆ ಇತ್ತೀಚೆಗೆ ಮಾದ್ಯಮಗಳಲ್ಲೂ ಸಚಿತ್ರ ವರದಿ ಪ್ರಕಟಗೊಂಡಿತ್ತು.


ನೂಜಿಬಾಳ್ತಿಲ ಗ್ರಾಮವನ್ನು ತಾಲೂಕು ಕೇಂದ್ರ ಕಡಬದಿಂದ ಸಂಪರ್ಕಿಸುವ ಕಾಯರಡ್ಕದಿಂದ ಪೇರಡ್ಕ ವರೆಗಿನ 2 ಕಿ.ಮೀ. ರಸ್ತೆ ತೀರಾ ಹೊಂಡ ಗುಂಡಿಗಳಿಂದ ಕೂಡಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು, ಈ ಬಗ್ಗೆ ಪ್ರಯಾಣಿಕರು ತೀರಾ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅಲ್ಲದೇ ಕಳೆದ ಹಲವು ವರ್ಷಗಳಿಂದ ಈ ರಸ್ತೆ ದುರಸ್ಥಿ ಮಾಡುವಂತೆ ಗ್ರಾಮ ಸಭೆಗಳಲ್ಲಿಯೂ ಆಗ್ರಹಿಸುತ್ತಾ ಬಂದಿದ್ದರು. ಇದೀಗ ಈ ರಸ್ತೆ ದುರಸ್ಥಿ ಕಾರ್ಯ ಪ್ರಾರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಾಣವಾಗಲಿದೆ.

ಕಡಬದಿಂದ ನೂಜಿಬಾಳ್ತಿಲ ಗ್ರಾಮವನ್ನು ಸಂಪರ್ಕಿಸುವ ಜಿ.ಪಂ. ರಸ್ತೆಯ ಕಾಯರಡ್ಕ- ಪೇರಡ್ಕ ರಸ್ತೆಗೆ ಪಿಡಬ್ಲ್ಯೂಡಿ ಇಲಾಖೆಯಿಂದ 2 ಕಿ.ಮೀ. ಡಾಮರೀಕರಣಕ್ಕೆ ರೂ.4 ಕೋಟಿ ಮಂಜೂರಾಗಿದ್ದು ಈಗಾಗಲೇ 50 ಲಕ್ಷ ಬಿಡುಗಡೆಗೊಂಡಿದ್ದು ಕಾಯರಡ್ಕ ಜಂಕ್ಷನ್‍ನಿಂದ ಮುಂದಕ್ಕೆ ಡಾಮರೀಕರಣಗೊಳ್ಳಲಿದೆ. ಕುಟ್ರುಪ್ಪಾಡಿ ಚರ್ಚ್ ಬಳಿಯಿಂದ ಪೇರಡ್ಕದವರೆಗೆ ಸುಮಾರು 545 ಮೀಟರ್ ರಸ್ತೆಯನ್ನು ಮಳೆಹಾನಿ ಯೋಜನೆಯಲ್ಲಿ ಬಿಡುಗಡೆಗೊಂಡ ರೂ. 19 ಲಕ್ಷದಲ್ಲಿ ಈಗಾಗಲೇ ದುರಸ್ಥಿ ಕಾಮಗಾರಿ ಪ್ರಾರಂಬಿಸಲಾಗಿದೆ.

ಆದರೆ ರೂ. 19 ಲಕ್ಷದಲ್ಲಿ ಪೂರ್ತಿ 545 ಮೀಟರ್ ಕಾಂಕ್ರೀಟಿಕರಣ ಮಾಡಲಾಗದೆ 340 ಮೀಟರ್ ಕಾಂಕ್ರೀಟಿಕರಣಗೊಳ್ಳುತ್ತಿದ್ದು, ಇನ್ನುಳಿದ 180 ಮೀಟರ್ ರಸ್ತೆ ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲು ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ತನ್ನ ಜಿಲ್ಲಾ ಪಂಚಾಯತ್ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಇದೀಗ ಬಿಡುಗಡೆಗೊಂಡಿರುವ ಅನುದಾನದಲ್ಲಿ ಪೂರ್ಣಪ್ರಮಾಣದಲ್ಲಿ ರಸ್ತೆ ದುರಸ್ಥಿ ಅಸಾಧ್ಯವಾಗಿರುವುದರಿಂದ ಪೂರ್ಣ ರಸ್ತೆ ದುರಸ್ಥಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪೇರಡ್ಕದಿಂದ 545 ಮೀಟರ್ ರಸ್ತೆ ದುರಸ್ಥಿ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಇದೀಗ ರಸ್ತೆಗೆ ಜಲ್ಲಿ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಇನ್ನು 3-4 ದಿನಗಳ ಬಳಿಕ ಕಾಂಕ್ರಿಟೀಕರಣ ಕಾಮಗಾರಿ ನಡೆಯಲಿದೆ. ಈ ಸಂದರ್ಭದಲ್ಲಿ ಸುಮಾರು 15 ದಿನಗಳ ಕಾಲ ರಸ್ತೆ ಸಂಚಾರ ನಿರ್ಬಂಧಿಸಲಾಗುವುದು, ಈ ಬಗ್ಗೆ ಸೂಚನ ಫಲಕ ಅಳವಡಿಸಲಾಗುವುಡು.

error: Content is protected !!

Join the Group

Join WhatsApp Group