ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.25.ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ 2019-20ನೇ ಸಾಲಿಗೆ ಪ್ರವೇಶಗಳು ಪ್ರಾರಂಭವಾಗಿದ್ದು ಪಿ.ಯು.ಸಿ/ಐ.ಟಿ.ಐ/ಜೆ.ಓ.ಡಿ.ಸಿ ಹಾಗೂ ತತ್ಸಮಾನ (10+2) ಪರೀಕ್ಷೆಯಲ್ಲಿ ಪಾಸಾದ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡ ವಿಶ್ವವಿದ್ಯಾನಿಲಯ ಹಂಪಿಯ ವಿಸ್ತರಣಾ ಕೇಂದ್ರವಾದ ಬಾದಾಮಿ ಬನಶಂಕರಿಯಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಮತ್ತು ಶಿಲ್ಪಕಲೆಯ 4 ವರ್ಷದ ಪದವಿ ತರಗತಿಗಳು ಇನ್ನಿತರ ಸಾಮಾನ್ಯ ಪದವಿಗಳಾದ ಬಿ.ಎ/ಬಿ.ಕಾಂ/ಬಿ.ಎಸ್.ಡಬ್ಲೂ ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಕಿಂಗ್, ಕೆ.ಎ.ಎಸ್, ರೈಲ್ವೆ ಇಲಾಖೆ, ಎಫ್.ಡಿ.ಎ ಮುಂತಾದವುಗಳಿಗೆ ಅವಕಾಶವಿದೆ.

ಅಲ್ಲದೆ ಉನ್ನತ ವ್ಯಾಸಂಗ ಮಾಡಬಯಸುವವರಿಗೆ ಎಂ.ವಿ.ಎ/ ಎಂ.ಎಫ್.ಎ/ ಎಂ.ಫಿಲ್ /ಪಿಎಚ್.ಡಿ ಮತ್ತು ಬೇರೆ ಕ್ಷೇತ್ರಗಳಾದ ಪತ್ರಿಕೋದ್ಯಮ. ಬಿ.ಪಿಎಡ್ ಮುಂತಾದವುಗಳನ್ನು ಕಲಿಯಲು ಅವಕಾಶವಿದೆ.ದೃಶ್ಯಕಲೆಯ ಈ ಪದವಿಗಳನ್ನು ಸ್ವ ಉದ್ಯೋಗ ಪ್ರಧಾನವಾಗಿ ರೂಪಿಸಲಾಗಿದೆ. ಸಾಂಪ್ರದಾಯಿಕ ಶಿಲ್ಪಕಲೆಯ ಪದವೀಧರರು ಸ್ವಂತ ಸ್ಟುಡಿಯೋ ಆರಂಭಿಸಿ ಮೂರ್ನಾಲ್ಕು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಚಿತ್ರಕಲಾ ಪದವೀಧರರು ಚಲನಚಿತ್ರ, ಧಾರಾವಾಹಿ, ದೂರದರ್ಶನ (ಟಿ.ವಿ)ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಎನಿಮೇಶನ್, ಪೋಸ್ಟರ್ ಡಿಸೈನ್, ಸ್ಕೆಚಿಂಗ್‍ನಲ್ಲಿ ಪಳಗಿದವರು ಬೇರೆ ಬೇರೆ ವಾಣಿಜ್ಯ ಕಂಪನಿಗಳು, ಜಾಹಿರಾತು ಸಂಸ್ಥೆಗಳು, ಟೆಕ್ಸಟೈಲ್ ಡಿಸೈನ್, ಪತ್ರಿಕೋದ್ಯಮ, ಫ್ಯಾಶನ್ ಡೈನ್ ಮುಂತಾದ ಅನೇಕ ಕಡೆಗಳಲ್ಲಿ ಕೆಲಸ ಮಾಡಬಹುದು.

ಬಾದಾಮಿ ಕೇಂದ್ರದಲ್ಲಿ ಶಿಲ್ಪಕಲೆಯಲ್ಲಿ ಪ್ರಾದೇಶಿಕವಾಗಿ ದೊರೆಯುವ ಚಾಲುಕ್ಯರ ವಾಸ್ತುಶಿಲ್ಪ ಮತ್ತು ಮೂರ್ತಿ ಶಿಲ್ಪಗಳನ್ನು ಪ್ರಧಾನವಾಗಿ ಅಭ್ಯಾಸ ಮಾಡಲಾಗುತ್ತಿದೆ. ಜೊತೆಗೆ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಸಂಪ್ರದಾಯ ಶೈಲಿಯ ಶಿಲ್ಪಗಳನ್ನು ಸಾಂದರ್ಭಿಕವಾಗಿ ಅಧ್ಯಯನ ಮಾಡಲಾಗುತ್ತಿದೆ. ಶಿಲ್ಪಗಳನ್ನು ಶಿಲೆ, ಕಾಷ್ಠ, ಮಣ್ಣು, ಪಿ.ಓ.ಪಿ ಮಾಧ್ಯಮಗಳಲ್ಲಿ ರಚಿಸಲು ಕಲಿಸಲಾಗುತ್ತದೆ. ಶಿಲ್ಪಕಲೆ ಮಾತ್ರವಲ್ಲದೇ ಚಿತ್ರಕಲೆಯಲ್ಲಿ ಸಾಂಪ್ರದಾಯಿಕ, ಜನಪದ, ಆಧುನಿಕ ಹಾಗೂ ಸಮಕಾಲೀನ ಪದ್ಧತಿಯಲ್ಲಿ ಭಾವಚಿತ್ರ, ಸಂಯೋಜನಾ ಚಿತ್ರಣ, ನಿಸರ್ಗ ಚಿತ್ರಣ ಹಾಗೂ ಅಲಂಕಾರಿಕ ಚಿತ್ರಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ.

ಬಾದಾಮಿ ಕೇಂದ್ರದಲ್ಲಿ ನಿರಂತರವಾಗಿ ಪ್ರಖ್ಯಾತ ಕಲಾವಿದರು ಮತ್ತು ಸೃಜನಶೀಲ ಯುವ ಕಲಾವಿದರಿಂದ ನಿಗದಿತ ಅವಧಿಗಳಲ್ಲಿ ಕಲಾಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾಶಿಬಿರ, ಕಾರ್ಯಾಗಾರ, ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತವೆ. ಕೇಂದ್ರವು ನಾಡೋಜ ಡಾ ಆರ್ ಎಂ, ಹಡಪದ ಅವರ ಹೆಸರಿನಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆಯ ಸುಸಜ್ಜಿತ ಆರ್ಟ್ ಗ್ಯಾಲರಿಯನ್ನು (ಕಲಾ ಸಂಗ್ರಹಾಲಯ) ಹೊಂದಿದೆ. ಇಲ್ಲಿ ನಮ್ಮ ಸಂಪ್ರದಾಯ ಶಿಲ್ಪ ಮತ್ತು ಚಿತ್ರಗಳನ್ನು ಸಂಗ್ರಹಿಸಿದ್ದು, ಪ್ರದರ್ಶನಕ್ಕೆ ಹಾಗೂ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:- 9449256814, 9448580086 ಸಂಪರ್ಕಿಸಬಹುದು.

error: Content is protected !!

Join the Group

Join WhatsApp Group