ಕಾಂಗ್ರೇಸ್ ಅಪಪ್ರಚಾರಕ್ಕೆ ಕ್ಷೇತ್ರದ ಜನ ತಕ್ಕ ಉತ್ತರ ನೀಡಿದ್ದಾರೆ: ಕೃಷ್ಣ ಶೆಟ್ಟಿ

(ನ್ಯೂಸ್ ಕಡಬ) newskadaba.com  ಕಡಬ,ಮೇ.18.ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ನವರ ನಿರಂತರ ಅಪಪ್ರಚಾರದ ನಡುವೆಯೂ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಆರನೇ ಬಾರಿಗೆ ಅಭೂತಪೂರ್ವ ವಿಜಯ ಸಾಧಿಸಿದ್ದಾರೆ, ಕ್ಷೇತ್ರದ ಜನತೆ ಕಾಂಗ್ರೇಸ್ನ ಕುಟಿಲ ತಂತ್ರಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಉಸ್ತುವಾರಿ ಕೃಷ್ಣ ಶೆಟ್ಟಿ ಕಡಬ ಹೇಳಿದರು.

ಅವರು ಗುರುವಾರ ಮಧ್ಯಾಹ್ನ ಕಡಬ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಶಾಸಕ ಅಂಗಾರ ನಿಷ್ಕಳಂಕ ಚಾರಿತ್ರ್ಯ, ನಿರಂತರ ಕ್ಷೇತ್ರದ ಒಡನಾಟ, ಅಭೂತಪುರ್ವ ಅಭಿವೃದ್ಧಿ ಕಾರ್ಯಗಳು ಹಾಗೂ ಬಿಜೆಪಿ ಕಾರ್ಯಕರ್ತರ ಅವಿರತ ಶ್ರಮದಿಂದ ಅಂಗಾರ ಅವರು 26 ಸಾವಿರ ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಮುಖ್ಯವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸೂಚನೆಯನ್ನು ಪೇಜ್ ಪ್ರಮುಖ್ ಹಾಗೂ ಬೂತ್ ಪ್ರಮುಖ್ ಕಾರ್ಯಕರ್ತರು ಚಾಚೂ ತಪ್ಪದೆ ಪಾಲನೆ ಮಾಡಿರುವುದರಿಂದ ಇಷ್ಟೊಂದು ಅಂತರದಿಂದ ಗೆಲವು ಸಾಧಿಸಲು ಸಾಧ್ಯವಾಗಿದೆ ಎಂದರು. ಕಳೆದ ಬಾರಿ ಅಂಗಾರ ಅವರ ವಿರುದ್ಧ ಸೋತ ಕಾಂಗ್ರೇಸ್ ಡಾ|ರಘು ಅವರು ಮತ್ತೆ ಕ್ಷೇತ್ರದ ಕಡೆಗೆ ತಿರುಗಿ ನೋಡಿಯೇ ಇಲ್ಲ. ಶಾಸಕ ಅಂಗಾರ ಅವರ ವಿರುದ್ಧ ಇಲ್ಲ ಸಲ್ಲದ ಆರೋಗಳನ್ನು ಮಾಡುತ್ತಾ ಅಂಗಾರ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಾನು ಮಾಡಿರುವುದಾಗಿ ಹೇಳಿಕೊಂಡು ಪುಕ್ಕಟೆ ಪ್ರಚಾರ ತೆಗೆದುಕೊಂಡಿದ್ದರು. ಇದು ಅವರಿಗೆ ತಿರುಗುಬಾಣವಾಗಿದೆ, ಮಾತ್ರವಲ್ಲ ಮಾಜಿ ಸಚಿವ ರಮಾನಾಥ ರೈ ಅವರು ಸುಳ್ಯ ಕ್ಷೇತ್ರಕ್ಕೆ ನಾನೇ ಶಾಸಕ, ಅಭಿವೃದ್ಧಿ ಕಾರ್ಯಗಳನ್ನು ತಾನೇ ಮಾಡುತ್ತಿರುವುದಾಗಿ ಸುಳ್ಳು ಹೇಳುತ್ತಾ ಶಾಸಕರ ಪ್ರತೀ ಕೆಲಸಕ್ಕೆ ಅಡ್ಡಿಯುಂಟು ಮಾಡುವ ದ್ವೇಷದ ರಾಜಕಾರಣ ಮಾಡುತ್ತಿದ್ದರು, ಶಾಸಕರನ್ನು ಪ್ರತೀ ಬಾರಿ ಕಡೆಗಣಿಸುತ್ತಾ ಹಕ್ಕು ಚ್ಯತಿ ಮಾಡುತ್ತಿದ್ದರು. ಮಾಜಿ ಇಂಧನ ಸಚಿವ ಶಿವಕುಮಾರ್ ಅಂತೂ ಶಾಸಕರ ಮುಖವೇ ನೋಡಿಲ್ಲ ಎಂದು ಅವಹೇಳನ ಮಾಡಿದ್ದರು. ಇಂತ ಆರೋಪ ಅಪಪ್ರಚಾರವನ್ನು ಸಹಿಸುತ್ತಾ ಸಜ್ಜನ ರಾಜಕಾರಣಿ ಅಂಗಾರ ಮತ್ತೊಮ್ಮೆ ಭಾರೀ ಅಂತರದಿಂದ ಗೆದ್ದು ಅಪ್ಪಟ ಬಂಗಾರವಾಗಿದ್ದಾರೆ ಎಂದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಸುಳ್ಳು ಭರವಸೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಮರಳು ಮಾಫಿಯಾ ಹಾಗೂ ಸ್ಯಾಂಂಡ್ ಮಾಫಿಯಾ ಮಾಡುತ್ತಾ ಕ್ಷೇತ್ರದ ಅಭಿವೃದ್ಧಿಯನ್ನು ಮರೆತಿದ್ದಾರೆ. ಕ್ಷೇದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಕೂಡಾ ಮಾಡುತ್ತಿಲ್ಲ, ಜಿ.ಪಂ. ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಆಹಾಕಾರವಿದೆ, ಯಾವುದೇ ಅಭಿವೃದ್ಧಿ ಮಾಡದ ಹಿನ್ನೆಯಲ್ಲಿ ಈ ಬಾರಿ ಅವರ ಸ್ವಗ್ರಾಮದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ, ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಡಬ ಜಿಲ್ಲಾ ಪಂ ಕ್ಷೇತ್ರದಲ್ಲಿ ಕಾಂಗ್ರೇಸ್ಗೆ ಲೀಡ್ ಇತ್ತು ಈ ಬಾರಿ ಬಿಜೆಪಿ 900 ಅಧಿಕ ಲೀಡ್ ಪಡೆದುಕೊಂಡಿದೆ ಎಂದು ಹೇಳಿದ ಕೃಷ್ಣ ಶೆಟ್ಟಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದೆ, ಯಡಿಯೂರಪ್ಪನವರ ಬಹುಮತ ಸಾಬೀತು ಪಡಿಸುವುದು ಖಚಿತ, ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ಮುಂದೆ ಶಾಸಕರ ನೇತೃತ್ವದಲ್ಲಿ ಆರು ತಿಂಗಳ ಒಳಗೆ ಕಡಬ ತಾಲೂಕು ಅನುಷ್ಟಾನಕ್ಕೆ ಪ್ರಯತ್ನಿಸಲಾಗುವುದು, ಕಡಬ ಭಾಗದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಡಬ ಮಹಾಶಕ್ತಿಕೇಂದ್ರ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ಸುಳ್ಯ ಮಂಡಲ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಫಯಾಝ್ ಕೆನರಾ, ಕಡಬ ಸಿ.ಎ ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಬಿಳಿನೆಲೆ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಚೆಕ್ಕಕೇಶವ ಕೈಂತಿಲ, ಬಿಜೆಪಿ ಪ್ರಮುಖರಾದ ಗಿರೀಶ್ ಎ.ಪಿ, ಲೋಕಯ್ಯ ಗೌಡ, ನಾರಾಯಣ ಪುಜಾರಿ ಪಾಲಪ್ಪೆ ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group