ಡಿಕೆಶಿ ಸುಳ್ಯಕ್ಕೆ ಬಂದು ನನ್ನ ಬಗ್ಗೆ ಸರ್ಟಿಫಿಕೇಟ್ ನೀಡುವ ಅವಶ್ಯಕತೆ ಇಲ್ಲ: ಶಾಸಕ ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ಮೇ.4.  ರಾಜ್ಯ ಇಂಧನ ಸಚಿವ ಡಿ.ಕೆ ಶಿವಕುಮಾರ್ ಬುಧವಾರ ಸುಳ್ಯದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ನಾನು ಕ್ಷೇತ್ರದ ಶಾಸಕರ ಮುಖವನ್ನೇ ನೋಡಿಲ್ಲ ಎನ್ನುವ ಮೂಲಕ ದುರಾಂಕರದಿಂದ ನನ್ನನ್ನು ಅವಮಾನ ಮಾಡಿದ್ದಾರೆ, ಇದು ಅವರು ಕ್ಷೇತ್ರ ಜನತೆಗೆ ಮಾಡಿದ ಅವಮಾನ ಎಂದು ಸುಳ್ಯ ಶಾಸಕ ಎಸ್ ಅಂಗಾರ ಅಕ್ರೋಶ ವ್ಯಕ್ತಪಡಿಸಿದರು. ಅವರು ಗುರುವಾರ ಸಾಯಂಕಾಲ ಆಲಂಕಾರಿನ ಬಿಜೆಪಿ ಚುನಾವಣಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಇಪ್ಪತೈದು ವರ್ಷಗಳಿಂದ ಕ್ಷೇತ್ರ ಶಾಸಕನಾಗಿ ಇಲ್ಲಿನ ಜನರ ವಿಶ್ವಾಸವನ್ನು ಗಳಿಸಿರುವ ನಾನು ಒಬ್ಬ ಹಿಂದುಳಿದ ಸಮುದಾಯದ ನಾಯಕ ಎನ್ನುವ ತಾತ್ಸಾರ ಭಾವನೆಯಲ್ಲಿ ಸಚಿವರು ನಾನು ಶಾಸಕರ ಮುಖವೇ ನೋಡಿಲ್ಲ ಎಂದು ಅಧಿಕಾರದ ಮದದಿಂದ ಅವಮಾನ ಮಾಡಿದ್ದಾರೆ, ಇದು ಅವರ ಘನತೆಗೆ ತಕ್ಕುದಾದ ಮಾತಲ್ಲ, ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಡಿಕೆ.ಶಿವಕುಮಾರ್ ಅವರ ಬಗ್ಗೆ ನಾನು ವ್ಯಯಕ್ತಿವಾಗಿ ಟೀಕೆ ಮಾಡುವುದಿಲ್ಲ. ನನ್ನ ಗುಣ ನಡತೆ ಹಾಗೂ ಡಿಕೆಶಿಯವರ ಗುಣ ನಡತೆಗೆ ಅಜಗಜಾಂತರವಿದೆ, ಅವರು ದೊಡ್ಡವರು ನಾನು ಚಿಕ್ಕವನು, ನಾನು ಸಚಿವರು ಹೋದಲ್ಲೆಲ್ಲಾ ಹೋಗುವುದಕ್ಕೆ ಆಗುವುದಿಲ್ಲ. ಅವರು ಎಲ್ಲೆಲ್ಲಾ ಹೋಗುತ್ತಾರೆ ಎನ್ನುವುದು ನನಗೂ ಗೊತ್ತಿಲ್ಲ. ದಿನಾ ಅವರ ಮುಖ ನೋಡಿಕೊಂಡು ಕುಳಿತುಕೊಳ್ಳುವ ಅವಶ್ಯಕತೆ ನನಗಿಲ್ಲ. ಹಾಗಾಗಿ ಅವರೊಟ್ಟಿಗೆ ನನ್ನ ತುಲನೆ ಮಾಡುವುದು ಸಮಂಜಸವಲ್ಲ, ನನ್ನ ಕ್ಷೇತ್ರದ ಜನತೆ ನನ್ನನ್ನು ಗುರುತಿಸುತ್ತಾರೆ ಹೊರತು, ಡಿಕೆಶಿ ನೋಡುವ ಅವಶ್ಯಕತೆಯಿಲ್ಲ. ನಾನು ಕಳೆದ ಇಪ್ಪತೈದು ವರ್ಷಗಳಿಂದ ಪ್ರಚಾರಕ್ಕಾಗಿ ಯಾವುದೇ ಕೆಲಸವನ್ನು ಮಾಡಿಲ್ಲ, ಕ್ಷೇತ್ರದ ಜನತೆಯ ವಿಶ್ವಾಸ ಹಾಗೂ ಅಭಿವೃದ್ದಿಗೆ ಚ್ಯುತಿಬಾರದಂತೆ ನಡೆದುಕೊಂಡಿದ್ದೇನೆ, ಎಂತಹ ಸಂದರ್ಭದಲ್ಲೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದುರಂಕಾರದಿಂದ ಮೆರೆದಿಲ್ಲ, ಯಾರಿಗೂ ಅನ್ಯಾಯ ಮಾಡಿಲ್ಲ. ಕ್ಷೇತ್ರ ಜನತೆ ನನ್ನ ಮೇಲೆ ನಿರಂತ ವಿಶ್ವಾಸವಿಟ್ಟು ಗೆಲ್ಲಿಸುತ್ತಾ ಬರುತ್ತಿದ್ದಾರೆ, ಡಿಕೆಶಿಯವರು ಇಲ್ಲಿ ಬಂದು ನನ್ನ ಬಗ್ಗೆ ಸರ್ಟಿಫಿಕೇಟ್ ನೀಡುವ ಅವಶ್ಯಕತೆ ಇಲ್ಲ. ಇದು ಕ್ಷೇತ್ರದ ಜನತೆಗೆ ಗೊತ್ತಿದೆ, ಅಧಿಕಾರದ ಮದದಿಂದ ಮೆರೆಯುತ್ತಿರುವ ಸಚಿವರು ನನ್ನ ಕ್ಷೇತ್ರದ ಸಾಮನ್ಯ ವ್ಯಕ್ತಿಯೊಬ್ಬ ಸಚಿವರಿಗೆ ವಿದ್ಯುತ್ ಸಮಸ್ಯೆ ಬಗ್ಗೆ ದೂರವಾಣಿ ಕರೆ ಮಾಡಿದರೆ, ಆತನೊಂದಿಗೆ ಅನುಚಿತವಾಗಿ ವರ್ತಿಸಿರುವುದಲ್ಲದೆ, ಆತನನ್ನು ಬಲತ್ಕಾರದಿಂದ ಬಂಧಿಸಿ ಪ್ರಕರಣ ದಾಖಲಿಸುವ ಸಣ್ಣತನ ತೋರಿದ್ದಾರೆ. ವಿದ್ಯುತ್ ಕೇಳಿದರೆ ಬಂಧನ ಮಾಡಿಸುವ ಸಚಿವರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು. ನನ್ನ ಕ್ಷೇತ್ರದ ಜನತೆ ಬುದ್ದಿವಂತರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಸಚಿವರ ಮಾತಿಗೆ ಇಲ್ಲಿ ಕಿಮ್ಮತ್ತು ಬೆಲೆ ದೊರೆಯುವುದಿಲ್ಲ ಎಂದು ಹೇಳಿದ ಅಂಗಾರ ಕ್ಷೇತ್ರದದಲ್ಲಿ ಅಭೂತಪುರ್ವ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಹಿನ್ನೆಯಲ್ಲಿ ಜನತೆ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡುವ ವಿಶ್ವಾಸ ನನಗಿದೆ, ಕ್ಷೇತ್ರದಲ್ಲಿ ಬಿಜೆಪಿ ಪರ ಒಲವು ಹೆಚ್ಚಾಗಿದೆ, ಹೇಗಾದರೂ ಮಾಡಿ ಸುಳ್ಯ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕು ಎನ್ನುವ ಕಾಂಗ್ರೇಸ್ ಪಕ್ಷದ ಆಸೆ ಗಗನಕುಸುಮವಾಗಲಿದೆ. ಈ ಬಾರಿ ಕನಿಷ್ಟ 25 ಸಾವಿರ ಮತಗಳಿಂದ ಗೆಲವು ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಣ ಹೆಂಡ ಹಂಚಿ ಚುನಾವಣೆ ಗೆಲ್ಲಬಹುದು ಎಂದು ಕಾಂಗ್ರೆಸ್ನವರ ಲೆಕ್ಕಾಚಾರ ಹಾಕಿದ್ದರೆ, ಅದು ಸಾದ್ಯವಿಲ್ಲ, ಕ್ಷೇತ್ರದ ಮತದಾರರು ಪ್ರಜ್ಞಾವಂತರು ಹಾಗೂ ಬುದ್ದಿವಂತರು, ಆಮಿಷಕ್ಕೆ ಒಳಗಾಗಿ ತಮ್ಮ ಮತವನ್ನು ಮಾರಿಕೊಳ್ಳುವಷ್ಟು ದಡ್ಡರು ಇಲ್ಲಿ ಇಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ಧನ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಾಕೇಶ್ ರೈ ಕಡೆಂಜಿ, ಬೆಳಂದೂರು ಶಕ್ತಿಕೇಂದ್ರ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ಬಿಜೆಪಿ ಮುಖಂಡರಾದ ದಯಾನಂದ ಗೌಡ ಆಲಡ್ಕ, ಪೂವಪ್ಪ ನಾಯ್ಕ, ಪ್ರದೀಪ್ ಕುಮಾರ್ ರೈ, ಕೇಶವ ಗೌಡ ಆಲಡ್ಕ, ದಲಿತ ಮುಖಂಡರಾದ ಅಣ್ಣಿ ಎಲ್ತಿಮಾರ್, ಕೃಷ್ಣ ಗಾಣಂತಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group