ಪೆರಾಬೆ: ಕಾಂಗ್ರೆಸ್ ಕಾರ್ಯಕರ್ತರ ಸಭೆ ► “ಈ ಬಾರಿ ನನಗೊಂದು ಅವಕಾಶ ಮಾಡಿಕೊಡಿ”- ಡಾ. ರಘು

(ನ್ಯೂಸ್ ಕಡಬ) newskadaba.com ಕಡಬ, ಎ.28. ಕಾಂಗ್ರೆಸ್ ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿ ನನಗೆ ಮತ್ತೊಂದು ಅವಕಾಶ ನೀಡಿದೆ, ಜನರ ಸೇವೆ ಮಾಡಲು ಕ್ಷೇತ್ರದ ಮತದಾರರು ಈ ಬಾರಿ ನನಗೊಂದು ಅವಕಾಶ ಮಾಡಿಕೊಡಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು ಬೆಳ್ಳಿಪ್ಪಾಡಿ ಹೇಳಿದರು.

ಗುರುವಾರ ಪೆರಾಬೆ ಗ್ರಾಮದ ಅಗತ್ತಾಡಿ ಕಡೀರಡ್ಕದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿ ಅತೀ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದೆ, ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಶಾಸಕರು ಹಾಗೂ ನಾಯಕರ ಸಹಕಾರ ಪಡೆದುಕೊಂಡು ಉದನೆಯಿಂದ ಕೊಣಾಜೆ ಸಂಪರ್ಕಕ್ಕೆ ಗುಂಡ್ಯ ಹೊಳೆಗೆ ಸೇತುವೆ, ಆರಂತೋಡುನಲ್ಲಿ ಸೇತುವೆ ಮಂಜೂರು, ಶಿಬಾಜೆ ರಸ್ತೆ ಅಭಿವೃದ್ಧಿ ಮೊದಲಾದವುಗಳನ್ನು ಒಳಗೊಂಡಂತೆ ಸುಳ್ಯ ಕ್ಷೇತ್ರದಲ್ಲಿ ನನ್ನ ಮೂಲಕ 35 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕೆಲಸ ಆಗಿದೆ. ಕ್ಷೇತ್ರದ ಅಭಿವೃದ್ಧಿ ಸಲುವಾಗಿ ಬಹಳಷ್ಟು ಕನಸುಗಳನ್ನು ಇಟ್ಟುಕೊಂಡಿದ್ದೇನೆ, ಇದನ್ನು ಶಾಸಕನಾಗಿ ಮಾಡಲು ಅವಕಾಶ ಮಾಡಿಕೊಡಿ ಎಂದು ಅವರು ಮನವಿ ಮಾಡಿದರು.

ಸುಳ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಸಂಪುರ್ಣ ಕುಂಠಿತವಾಗಿದೆ, ಮತದಾರರು ರೋಸಿ ಹೋಗಿದ್ದಾರೆ, ಮತದಾರರು ಒಂದಲ್ಲ ಒಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಯೋಜನೆಯ ಪ್ರಯೋಜನ ಪಡೆದಿದ್ದಾರೆ, ಹೀಗಾಗಿ ಜನರ ಒಲವು ಕಾಂಗ್ರೆಸ್ ಕಡೆಗೆ ಇದ್ದು, ಕಾರ್ಯಕರ್ತರು ಇದನ್ನು ಮತಗಳಾಗಿ ಪರಿವರ್ತನೆ ಮಾಡಿದಲ್ಲಿ ಈ ಬಾರಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲವು ಸಾಧಿಸುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದ ಅವರು ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು. ಕಡಬ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಠ ಜಾತಿ ಘಟಕದ ಅಧ್ಯಕ್ಷ ಶಶಿಧರ್ ಬೊಟ್ಲಡ್ಕ, ಪೆರಾಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ತಿಮ್ಮಪ್ಪ ಗೌಡ , ಇಬ್ರಾಹಿಂ, ಕಾಂಗ್ರೆಸ್ ಪಕ್ಷದ ಕೊಂತೂರು-ಪೆರಾಬೆ ಗ್ರಾಮ ಉಸ್ತುವಾರಿ ಸಾಜನ್, ಪಕ್ಷದ ಮುಖಂಡರಾದ ಕೇಶವ ಪುಜಾರಿ, ಮೋನ್ಸಿ ಫ್ರಾನ್ಸಿಸ್ ಮಾತನಾಡಿದರು. ಪಕ್ಷದ ಕಾರ್ಯಕರ್ತರಾದ ಕುಶಾಲ್ ಕಡಬ, ಮಹಮ್ಮದ್ ಆಲಿ ಕೋಚಕಟ್ಟೆ, ಖಲಂದರ್ ಕೋಚಕಟ್ಟೆ, ಮನ್ಸೂರ್ ಕೋಚಕಟ್ಟೆ, ಆನಂದ ಕಡೀರಡ್ಕ, ಬಾಲಪ್ಪ, ವಸಂತ ಪುರುಚಬೆಟ್ಟು, ಶ್ರೀಮತಿ ಗಿರಿಜಾ, ಶ್ರೀಮತಿ ಭಾಗೀರತಿ ಮೊದಲಾದವರು ಇದ್ದರು.

error: Content is protected !!

Join the Group

Join WhatsApp Group