ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನ ವಾರ್ಷಿಕೋತ್ಸವ ► ಧನಾತ್ಮಕ ಮನೋಭಾವ ಬೆಳೆಸಿಕೊಂಡು ಗುರಿ ಸಾಧಿಸಿ- ಡಾ|ವೇದಾವತಿ

(ನ್ಯೂಸ್ ಕಡಬ) newskadaba.com ಕುಂತೂರು, ಎ.17. ಶೈಕ್ಷಣಿಕವಾಗಿ ನಿರೀಕ್ಷಿತ ಗುರಿ ತಲುಪಲು ಸತತ ಪರಿಶ್ರಮ ಹಾಗೂ ಧನಾತ್ಮಕ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಇರಬೇಕಾದ್ದು ಮುಖ್ಯ. ಯಾವುದೇ ವೈಫಲ್ಯಗಳಿಗೂ ಧೃತಿಗೆಡದೆ ಋಣಾತ್ಮಕವಾಗಿ ಚಿಂತಿಸದೆ ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಜೀವನದಲ್ಲಿ ಸಫಲತೆಯನ್ನು ಕಾಣಲು ಸಾಧ್ಯವಿದೆ ಎಂಬುದಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಕಡಬ ಇಲ್ಲಿ ಪ್ರೌಢಶಾಲೆ ವಿಭಾಗದ ಉಪಪ್ರಾಂಶುಪಾಲೆ ಡಾ|ವೇದಾವತಿ ಅವರು ಅಭಿಪ್ರಾಯಪಟ್ಟರು. ಅವರು ಇಲ್ಲಿನ ಮಾರ್ ಇವಾನಿಯೋಸ್ ಕಾಲೇಜಿನ ಪದವಿ ಹಾಗೂ ಬಿ.ಎಡ್. ವಿಭಾಗಗಳ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಲೋಪದೋಷಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ತಿದ್ದಿಕೊಂಡು ಶಿಕ್ಷಣ ಸಂಸ್ಥೆಯ ಆಶೋತ್ತರಗಳನ್ನು ಈಡೇರಿಸುವುದರೊಂದಿಗೆ ಸಂಸ್ಥೆ ಹಾಗೂ ಗುರುಹಿರಿಯರಿಗೆ ಕೀರ್ತಿ ತರುವವರಾಗಬೇಕು ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ ಕ್ನಾನಾಯ ಜ್ಯೋತಿ ಪ್ರೌಢಶಾಲೆ ಕಡಬ ಇಲ್ಲಿನ ಪ್ರಾಂಶುಪಾಲರು ವಂ|ರೆ|ಫಾ|ಸ್ಟಿಜೋ ಅವರು ಮಾತನಾಡುತ್ತಾ, ಶಿಕ್ಷಕರು ವಿದ್ಯಾರ್ಥಿಗಳ ಮನಸನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರ ಹೃದಯವನ್ನು ಮುಟ್ಟುವಂತೆ ಪ್ರೀತಿ ಮತ್ತು ಆತ್ಮೀಯತೆಯೊಂದಿಗೆ ಸದ್ವಿಚಾರಗಳನ್ನು ತಿಳಿಸಿ ಸುಸಂಸ್ಕೃತರಾದ ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡುವುದರ ಮೂಲಕ ದೇವರ ಸ್ಥಾನವನ್ನು ತಲುಪಲು ಸಾಧ್ಯವಿದೆ. ಅದರಂತೆ ಗುರುಗಳು ಉನ್ನತ ಸ್ಥಾನಕ್ಕೇರಿ ತಮ್ಮ ಪ್ರತಿಭೆ ಸಕಲ ಸಾಮರ್ಥಗಳೊಂದಿಗೆ ತಮ್ಮ ಅನುಭವದೊಂದಿಗೆ ಜ್ಞಾನವನ್ನು ಧಾರೆಯೆರೆದು ಸಮರ್ಪಣಾ ಭಾವದೊಂದಿಗೆ ವೃತ್ತಿಯನ್ನು ಮುನ್ನಡೆಸಬೇಕು ಎಂಬುದಾಗಿ ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಚಾರ್ಯ ವಂ|ರೆ|ಫಾ|ಫಿಲಿಪ್ ನೆಲ್ಲಿವಳ ಅವರು ಶೈಕ್ಷಣಿಕ ವರ್ಷದ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪುರಕವಾಗಬಲ್ಲ ಪಠ್ಯಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ವರ್ಷದಲ್ಲಿ ಕೈಗೊಂಡ ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡ ವಾರ್ಷಿಕ ಪತ್ರಿಕೆ “ಸ್ಪ್ರೌಟಿಂಗ್ ಸ್ಪ್ರಿಂಗ್” ಅನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು. ಬಿ.ಎಡ್ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ರಾಮ್ ಪ್ರಸಾದ್ ಮತ್ತು ಪದವಿ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಕು| ಚೈತ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಶಾಲಿನಿ ಸ್ವಾಗತಿಸಿ, ವಿದ್ಯಾರ್ಥಿನಿ ಕು| ಚೈತ್ರಾ ವಂದಿಸಿದರು. ಬಿ.ಎಡ್ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಉಮಾಶ್ರೀ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

error: Content is protected !!

Join the Group

Join WhatsApp Group