(ನ್ಯೂಸ್ ಕಡಬ) newskadaba.com, ಆ.26: ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನಗಿರಿ ಬೆಟ್ಟಗಳಿಗೆ ಆ.26 ಹಾಗೂ 27ರಂದು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ರಜೆಯ ನಿಮಿತ್ತ ಹೆಚ್ಚಿನ ಪ್ರವಾಸಿಗರು ಈ ಬೆಟ್ಟಗಳಿಗೆ ತೆರಳುತ್ತಾರೆ. ಆದರೆ. ಇದೇ ಸಂದರ್ಭದಲ್ಲಿ ಗೌರಿ–ಗಣೇಶ ಹಬ್ಬದ ನಿಮಿತ್ತ ಸ್ಥಳೀಯರು ಇಂದು ಹಾಗೂ ನಾಳೆ ಸೀತಾಳಯ್ಯನಗಿರಿ ಹಾಗೂ ಮುಳ್ಳಯ್ಯನಗಿರಿಯಲ್ಲಿನ ಮುಳ್ಳಪ್ಪ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಮಾಡುತ್ತಾರೆ. ಹಾಗಾಗಿ, ಪ್ರವಾಸಿಗರ ದಟ್ಟಣೆಯ ಕಾರಣ ಪೂಜೆಗೆ ವಿಳಂಬವಾಗಬಾರದು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಶ್ರೀ ಮೇಲುಗದ್ದುಗೆ ಮುಚ್ಚಯ್ಯನಗಿರಿ, ಶ್ರೀ ಸೀತಾಳಯ್ಯನಗಿರಿ ಮತ್ತು ಶ್ರೀ ಗುರು ನಾರುಕಂತೆಮಠ ದೇವಸ್ಥಾನಗಳಿಗೆ ಕಸಬಾ ಹೋಬಳಿ, ವಸ್ತಾರೆ, ಅವತಿ, ಅಂಬಳೆ ಹಾಗೂ ಜಾಗರ ಹೋಬಳಿಯ 40ಕ್ಕೂ ಅಧಿಕ ಗ್ರಾಮಸ್ಥರು ಭೇಟಿ ನೀಡಿ ಹಿಂದಿನ ಸಂಪ್ರದಾಯದಂತೆ ಪೂಜೆ, ಹಣ್ಣು–ಕಾಯಿ ಮಾಡಿಸಿಕೊಂಡು ಬರುವುದು ಪಾರಂಪರಿಕ ಆಚರಣೆಯಾಗಿರುತ್ತದೆ. ಹಾಗಾಗಿ, ಗಿರಿಭಾಗದ ಪ್ರವಾಸಿ ತಾಣಗಳಿಗೆ ಸ್ಥಳೀಯರಿಗೆ, ಗ್ರಾಮಸ್ಥರಿಗೆ ಮಾತ್ರವೇ ಅವಕಾಶವಿದೆ. ಈಗಾಗಲೇ ಈ ಸ್ಥಳಗಳಲ್ಲಿ ರೆಸಾರ್ಟ್ ಅಥವಾ ಹೋಂಸ್ಟೇಗಳಲ್ಲಿ ಬುಕ್ಕಿಂಗ್ ಮಾಡಿಕೊಂಡವರುಗಳನ್ನು ಹೊರತುಪಡಿಸಿ ಇನ್ನು ಯಾವುದೇ ಇತರೆ ಜಿಲ್ಲೆ, ರಾಜ್ಯದ ಪ್ರವಾಸಿಗಳು ಬರುವುದನ್ನು ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.












