(ನ್ಯೂಸ್ ಕಡಬ) newskadaba.com ಜೂ. 14. ರಾಜ್ಯದಲ್ಲಿ ಜೂನ್ 16ರಿಂದ ಓಲಾ, ಊಬರ್ ಮತ್ತು ರ್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸೇವೆಯನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರು ಸೇರಿದಂತೆ ಕೆಲ ಪಟ್ಟಣಗಳಲ್ಲಿ ಹಲವರು ಈ ಬೈಕ್ ಟ್ಯಾಕ್ಸಿಯನ್ನು ಅವಲಂಬಿಸಿದ್ದು, ಆಟೋ ಕ್ಯಾಬ್ ಗೆ ಹೋಲಿಸಿದರೆ ಇದರ ವೆಚ್ಚವೂ ಕಡಿಮೆ. ಜೊತೆಗೆ ಕಡಿಮೆ ಸಮಯದಲ್ಲಿ ನಿಗದಿತ ಸ್ಥಳಕ್ಕೆ ತಲುಪಬಹುದು. ಆದರೆ ಜೂನ್ 16ರಿಂದ ಈ ಸೇವೆಗಳು ಬಂದ್ ಆಗಲಿವೆ. ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ಹೇರಿ ಏಪ್ರಿಲ್ 2ರಂದು ಏಕಸದಸ್ಯ ಪೀಠ ನೀಡಿದ್ದ ದೇಶಕ್ಕೆ ತಡೆಕೋರಿ ಓಲಾ, ಊಬರ್ ನಂತಹ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ತಡೆ ನೀಡಲು ನಿರಾಕರಿಸಿತು.
ಶುಕ್ರವಾರದ ವಿಚಾರಣೆಯಲ್ಲಿ ಸರ್ಕಾರ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಹೊಸ ನಿಯಮಗಳನ್ನು ರೂಪಿಸುತ್ತಿದ್ದರೆ ಮಾತ್ರ ತಡೆಯಾಜ್ಣೆ ನೀಡಲು ಸಾಧ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಆದರೆ, ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ದೃಢಪಡಿಸಿದರು.