(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ವೈದ್ಯಕೀಯ ತಂತ್ರಜ್ಞಾನದ ಪ್ರಗತಿಯಿಂದ ಸರ್ಜರಿ ರಹಿತವಾಗಿ ಮಕ್ಕಳಲ್ಲಿ ವಕ್ರಪಾದ ದೋಷವನ್ನು ಸರಿಪಡಿಸಬಹುದಾಗಿದೆ ಎಂದು ವೆನ್ಲಾಕ್ ಆಸ್ಪತ್ರೆಯ ಎಲುಬು ಮತ್ತು ಕೀಳು ತಜ್ಞ ಡಾ.ಕೆ.ಆರ್ ಕಾಮತ್ ತಿಳಿಸಿದ್ದಾರೆ. ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶ್ವ ವಕ್ರಪಾದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಟ್ಟುವ ಪ್ರತಿ ಸಾವಿರ ಮಕ್ಕಳಲ್ಲಿ 1-3 ಮಕ್ಕಳಲ್ಲಿ ವಕ್ರಪಾದ ಸಮಸ್ಯೆ ಕಂಡುಬರುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಇದಕ್ಕೆ ಉಚಿತವಾಗಿ ಪ್ರತಿ ಗುರುವಾರ ವಿಶೇಷ ಚಿಕಿತ್ಸೆ ನೀಡಲಾಗುತ್ತದೆ. ಕಳೆದ ಹತ್ತು ವರ್ಷದಲ್ಲಿ 500ಕ್ಕೂ ಅಧಿಕ ಮಕ್ಕಳಿಗೆ ವೆನ್ಲಾಕ್ ನಲ್ಲಿ ವಕ್ರಪಾದ ಚಿಕಿತ್ಸೆ ನೀಡಲಾಗಿದ್ದು, ಶೇ.90ರಷ್ಟು ಮಕ್ಕಳು ಗುಣಮುಖರಾಗಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ವೆನ್ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಉದ್ಘಾಟಿಸಿದರು. ಐ.ಎಂ.ಎ ಮಂಗಳೂರು ಘಟಕ ಅಧ್ಯಕ್ಷೆ ಡಾ.ಜೆಸ್ಸಿ ಮರಿಯಾ ಡಿಸೋಜಾ, ರೋಟರಿ ಕ್ಲಬ್ ಸಂಸ್ಥೆಯ ಸಿ.ನಝ್ರತ್, ವೆನ್ಲಾಕ್ ಆರ್.ಎಂ.ಓ ಡಾ.ಸುಧಾಕರ್, ಪ್ರಿಯಾ ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.