(ನ್ಯೂಸ್ ಕಡಬ) newskadaba.com ಜೂ. 12. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವತಿಯಿಂದ ಮಂಗಳರಾಮ ಕೇಂದ್ರದ ರಾಮನಾಮ ಜಪಕರು ಭಾರತೀಯ ಸೇನೆಯ ನಿಧಿಗಾಗಿ ಸಂಗ್ರಹಿಸಿದ್ದ ಒಟ್ಟು 1,77,777 ರೂ.ವನ್ನು ದೇಣಿಗೆಯಾಗಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ನಗರದ ರಥಬೀದಿಯ ಶಾಖಾ ಮಠದಲ್ಲಿ ಹಸ್ತಾಂತರಿಸಿದ್ದಾರೆ.
ದೇಣಿಗೆ ಸ್ವೀಕರಿಸಿ ಮಾತನಾಡಿದ ಸಂಸದ ಕ್ಯಾ. ಚೌಟ, “ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರ ತ್ಯಾಗ ಮತ್ತು ಬಲಿದಾನ ಸದಾ ಸ್ಮರಣೀಯ. ಯೋಧರ ಕುಟುಂಬಗಳ ಕಲ್ಯಾಣಕ್ಕಾಗಿ ಹಾಗೂ ದೇಶದ ರಕ್ಷಣೆಯ ನಿಧಿಗೆ ದೇಣಿಗೆ ಸಮರ್ಪಿಸಿರುವುದು ಶ್ಲಾಘನೀಯ ವಿಚಾರ. ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮತ್ತು ಮಂಗಳರಾಮ ಕೇಂದ್ರದ ರಾಮ ನಾಮ ಜಪಕರು ಸಂಗ್ರಹಿಸಿದ ಈ ದೇಣಿಗೆಯು ಅವರ ಅಪಾರ ದೇಶಭಕ್ತಿ ಮತ್ತು ಸೇವಾ ಮನೋಭಾವಕ್ಕೆ ಉತ್ತಮ ಉದಾಹರಣೆಯಾಗಿದೆ. ಬೇರೆಯವರಿಗೂ ಸ್ಫೂರ್ತಿ ನೀಡುವ ಇಂತಹ ಮಹತ್ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು” ಎಂದು ತಿಳಿಸಿದ್ದಾರೆ.
ಇದೇ ವೇಳೆ ಆಪರೇಷನ್ ಸಿಂದೂರ್ ನ ಬಳಿಕ ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ವ್ಯಕ್ತಪಡಿಸಲು ರಚಿಸಲಾದ ಸರ್ವಪಕ್ಷಗಳ ನಿಯೋಗದ ತಂಡದಲ್ಲಿ ಸದಸ್ಯರಾಗಿ ಭಾರತವನ್ನು ಪ್ರತಿನಿಧಿಸಿದ್ದ ಸಂಸದ ಕ್ಯಾ. ಚೌಟ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಶ್ರೀಪಾದ ಶೆಣೈ, ಉಪಾಧ್ಯಕ್ಷ ಪಾಂಡುರಂಗ ಆಚಾರ್ಯ, ಎಸ್. ಮುಕುಂದ್ ಕಾಮತ್ , ವೇ|ಮೂ| ನಾರಾಯಣಮೂರ್ತಿ, ವೇ|ಮೂ| ಕೃಷ್ಣರಾಯ ಪುರಾಣಿಕ್, ವೇ|ಮೂ| ರಾಮಕೃಷ್ಣ ಭಟ್, ಬಸ್ತಿ ಪುರುಷೋತ್ತಮ ಶೆಣೈ, ಕಾಪು ಸತೀಶ್ ಭಟ್ ,ಕೊಂಚಾಡಿ ದಿನಕರ್ ಶೆಣೈ, ಎನ್.ಎನ್ ಪಾಲ್, ಸಿಎ ನರೇಂದ್ರ ಪೈ, ಭವಾನಿ ಶಂಕರ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಮುಂತಾದವರು ಉಪಸ್ಥಿತರಿದ್ದರು.