ಪಾಣೆಮಂಗಳೂರು ಹಳೇ ಸೇತುವೆಯಲ್ಲಿ ಸಂಚಾರ ನಿರ್ಬಂಧ ತಹಶೀಲ್ದಾರ್ ಆದೇಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 11. ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಸಂಚಾರ ನಿರ್ಬಂಧ ಮಾಡಿ ಎಂದು ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಆದೇಶ ಹೊರಡಿಸಿದ್ದಾರೆ.

ವರದಿಯ ಪ್ರಕಾರ, ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದಲ್ಲಿರುವ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಹಳೆಯ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಸೇತುವೆಯಲ್ಲಿ ಈ ಹಿಂದೆ ಬಿರುಕು ಬಂದ ಹಿನ್ನೆಲೆ ಸೇತುವೆಯ ಮೇಲೆ ಘನ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಕಬ್ಬಿಣದ ಕಮಾನು ಅಳವಡಿಸಿ ಬಂದ್ ಮಾಡಲಾಗಿತ್ತು. ಪ್ರಸ್ತುತ ಕಬ್ಬಿಣದ ಕಮಾನನ್ನು ಹಾನಿಗೊಳಿಸಿ ಘನವಾಹನಗಳು ಸಂಚರಿಸುತ್ತಿರುವುದು ವರದಿಯಾಗಿರುತ್ತದೆ.

ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಅಲ್ಲದೇ ಸೇತುವೆಯ ಧಾರಣಾ ಸಾಮರ್ಥ್ಯದ ಕುರಿತು ಸಕ್ಷಮ ಇಲಾಖೆಯಿಂದ ವರದಿ ಬರುವವರೆಗೆ ಸೇತುವೆಯ ಮೇಲೆ ಸಂಚಾರ ಮಾಡುವುದನ್ನು ಅಪಾಯಕಾರಿ ಎಂದು ಪರಿಗಣಿಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 68ರ ಪ್ರಕಾರ ಈ ಅದೇಶ ಹೊರಡಿಸಿದೆ.

error: Content is protected !!
Scroll to Top