(ನ್ಯೂಸ್ ಕಡಬ) newskadaba.com ಜೂ. 11. ಚಿಲ್ಲರೆ ಇಲ್ಲ ಎಂದಿದ್ದಕ್ಕೆ ಮಹಿಳೆಯೊಬ್ಬಳು ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಹಲ್ಲೆ ಮಾಡಿದ ಘಟನೆ ಕುಂದಾಪುರದ ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಮೆಡಿಕಲ್ ಶಾಪ್ ನಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವತಿಯನ್ನು ಲಕ್ಷ್ಮೀ ಎಂದು ಗುರುತಿಸಲಾಗಿದೆ. ಯಾಸ್ಮಿನ್ ಹಲ್ಲೆಗೈದ ಆರೋಪಿಯಾಗಿದ್ದು, ಈಕೆ ಮಾವಿನಕಟ್ಟೆಯ ಮೆಡಿಕಲ್ಗೆ ಬಂದು ಔಷಧ ಖರೀದಿಸಿ 500ರ ನೋಟು ಕೊಟ್ಟಿದ್ದಳು. ಈ ವೇಳೆ ಯುವತಿ ಚಿಲ್ಲರೆ ಇಲ್ಲ ಎಂದಾಗ ಯಾಸ್ಮಿನ್ ಅದೇ ವಿಚಾರಕ್ಕೆ ಯುವತಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದಿದ್ದಾಳೆ ಎನ್ನಲಾಗಿದೆ. ಹಲ್ಲೆಗೊಳಗಾದ ಲಕ್ಷ್ಮೀ ಅವರನ್ನು ಕುಂದಾಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಆರೋಗ್ಯ ವಿಚಾರಿಸಿದರು. ಘಟನೆ ನಡೆದ ಮೆಡಿಕಲ್ ಗೂ ಭೇಟಿ ಮಾಹಿತಿ ಸಂಗ್ರಹಿಸಿದರು.