(ನ್ಯೂಸ್ ಕಡಬ) newskadaba.com ಕಡಬ, ಜೂ. 11. ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಸಂಸ್ಥೆಯ ಆವರಣದಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಪಂಜ ವಲಯ ಅರಣ್ಯ ಅಧಿಕಾರಿ ಶ್ರೀಮತಿ ಸಂಧ್ಯಾ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭೂಮಿಯ ಮೇಲಿನ ಜೀವ ವೈವಿಧ್ಯವನ್ನು ರಕ್ಷಿಸಲು ಪರಿಸರ ಪರಿಪೂರ್ಣವಾಗಿ ನಿರ್ಮಾಣಗೊಂಡಿದೆ; ಇಂದು ಮನುಷ್ಯನ ಸ್ವಾರ್ಥ, ದುರಾಸೆಯಿಂದಾಗಿ ಪರಿಸರ ಅಸಮತೋಲನಗೊಂಡಿದೆ. ಜೀವವೈವಿಧ್ಯವನ್ನು, ಸಸ್ಯ ವೈವಿಧ್ಯವನ್ನು ಕಾಪಾಡಿಕೊಂಡು ಹೋಗುವ ದೃಢವಾದ ನಿರ್ಧಾರವನ್ನು ಯುವ ಪೀಳಿಗೆ ಮಾಡಬೇಕೆಂದು ಅತಿಥಿ ಭಾಷಣದಲ್ಲಿ ಅವರು ಸಲಹೆ ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಆನ್ಸ್ ಶಾಲಾ ಪ್ರಾಂಶುಪಾಲರಾದ ವಂ.| ಸುನಿಲ್ ಪ್ರವೀಣ್ ಪಿಂಟೋ ಅವರು ‘ಅಂತರ್ಜಲ ಕುಸಿತ, ವಿಪರೀತ ಪ್ಲಾಸ್ಟಿಕ್ ಬಳಕೆ, ಅರಣ್ಯ ನಾಶಗಳು ಹೆಚ್ಚುತ್ತಿರುವ ಈಗಿನ ಕಾಲಘಟ್ಟದಲ್ಲಿ ಇದನ್ನು ತಡೆಗಟ್ಟುವ ಮಾರ್ಗೋಪಾಯಗಳನ್ನು ಕೂಡಲೇ ಕಂಡುಕೊಳ್ಳಬೇಕಾಗಿದೆ’ ಎಂದರು . ಪರಿಸರ ಸಂರಕ್ಷಣೆಯ ಕುರಿತು ನಡೆಸಿದ ಭಿತ್ತಿ ಚಿತ್ರ ರಚನೆಯಲ್ಲಿ ವಿಜೇತರಾದವರಿಗೆ ಅವರು ಬಹುಮಾನ ವಿತರಿಸಿದರು.
ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣಾ ಸಮೂಹಗೀತೆ ಹಾಗೂ ಸ್ಥಳೀಯ ಬಹುಪಯೋಗಿ ಸಸ್ಯೋತ್ಪನ್ನಗಳ ಮಾಹಿತಿ ಹಾಗೂ ಪ್ರದರ್ಶನ ಕಾರ್ಯಕ್ರಮ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜು ವಿಭಾಗದ ಹಿಂದಿ ಉಪನ್ಯಾಸಕರಾದ ಮ್ಯಾಥ್ಯು ಇ. ಜೆ ಸೈಂಟ್ ಜೋಕಿಮ್ಸ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾ ಉಪಸ್ಥಿತರಿದ್ದರು. ಇಕೋ ಕ್ಲಬ್ ನಿರ್ದೇಶಕಿ ವೇದಾವತಿ ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮಹಮದ್ ಸವಾದ್ ವಂದಿಸಿ, ಸಾನಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.