ಶಿರಾಡಿ ಪೇರಮಜಲು ಎಎನ್ಎಫ್ ಹಾಗೂ ದಲಿತ ಸಂವಾದ ಸಭೆ ► ಬೇಡಿಕೆಗೆ ಸ್ಪಂದಿಸಲು ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಎ.3. ಚುನಾವಣಾ ಹಿನ್ನಲೆಯಲ್ಲಿ ಶಿರಾಡಿ ಗ್ರಾಮದ ಪೆರಮಜಲು ಎಂಬಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿರಾಡಿ ಗ್ರಾಮ ಶಾಖಾ ವತಿಯಿಂದ ಜನಸ್ನೇಹಿ ಪೊಲೀಸ್ ಮತ್ತು ದಲಿತರ ಕುಂದುಕೊರತೆ ಸಭೆಯನ್ನು ಪೇರಮಜಲು ಎಂಬಲ್ಲಿ ಮಾ.29ರಂದು ಗ್ರಾಮ ಸಮಿತಿಯ ಸಂಘಟನಾ ಸಂಚಾಲಕರಾದ ಅಣ್ಣು ಎಂ. ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸಭೆಯಲ್ಲಿ ದಲಿತರ ಕುಂದುಕೊರತೆಗಳ ಸಮಸ್ಯೆಗಳನ್ನು ಆಲಿಸಿ, ಮಾಹಿತಿ ನೀಡಿದ ಎಎನ್ಎಫ್ನ ಸಬ್ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ಪೊಲೀಸ್ ಹಾಗೂ ಜನರಿಗೆ ನೇರ ಸಂಪರ್ಕ ಇರಬೇಕಾದ ಜನಸಂಪರ್ಕ ಸಭೆ ಇದಾಗಿದ್ದು ವಿವಿಧ ಇಲಾಖಾಧಿಕಾರಿಗಳನ್ನು ಸೇರಿಸಿಕೊಂಡು ಸಂವಾದ ನಡೆಸುವ ಮೂಲಕ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುವುದು ಇದರ ಉದ್ದೇಶವಾಗಿದೆ. ಜನರಿಗೆ ಪೊಲೀಸರ ಬಗ್ಗೆ ಭಯವನ್ನು ದೂರಮಾಡಲು ಮತ್ತು ಸಮಸ್ಯೆಗೆ ಜನರ ಬಳಿಗೆ ಬಂದು ಸ್ಪಂದಿಸಲು ಅವಕಾಶ ಮಾಡಿಕೊಡಲಾಗುತ್ತದೆ, ಪೊಲೀಸರೆಂದರೆ ಹಗಲು ರಾತ್ರಿ ನಿದ್ದೆ ಇಲ್ಲದೆ ಜನರ ಸಮಸ್ಯೆಗಳಿಗೆ ಸಹಕರಿಸಲಾಗುತ್ತದೆ, ಈಗ ಚುನಾಯಿತ ಜನಪ್ರತಿನಿದಿಗಳ ವ್ಯಾಪ್ತಿಯಿಂದ ನಾವು ಹೊರಗಿದ್ದು ನೇರವಾಗಿ ಚುನಾವಣಾಧಿಕಾರಿಗಳ ಅಧೀನದಲ್ಲಿದ್ದು ಅವರ ಮಾರ್ಗದರ್ಶನ ಸಲಹೆ, ಸೂಚನೆಗಳಂತೆ ಕರ್ತವ್ಯ ನಿರ್ವಹಿಸಲಾಗುತ್ತದೆ ಎಂದ ಅವರು, ಏನೇ ಸಮಸ್ಯೆಗಳಿದ್ದರು ನಮಗೆ ತಿಳಿಸಿ ಯಾ ಕಂಟ್ರೋಲ್ ರೂಂ ನಂಬರ್ 100 ಕ್ಕೆ ಕರೆ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ ಅವರು ದ.ಸಂ.ಸಮಿತಿ ಈ ರೀತಿಯಾಗಿ ಸಂವಾದ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು. ಕರ್ನಾಟಕ ದ.ಸಂ.ಸಮಿತಿಯ ತಾಲೂಕು ಸಂಘಟನಾ ಸಂಚಾಲಕರಾದ ಆನಂದ ಮಿತ್ತಬೈಲ್ರವರು ದಲಿತರ ಕುಂದುಕೊರತೆಯ ಬಗ್ಗೆ ಮಾತನಾಡಿ ಈ ಭಾಗಕ್ಕೆ ನಕ್ಸಲರು ಪ್ರವೇಶ ಮಾಡುತ್ತಾರೆ ಯಾಕೆಂದರೆ ಇಲ್ಲಿ ಸುಮಾರು 40ರಿಂದ 50ರಷ್ಟು ಮನೆ ದಲಿತರ ಕುಟುಂಬಗಳಿದ್ದು ಈ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸ್ಟ್ರೀಟ್ಲೈಟ್ ಇಲ್ಲ, ಬಸ್ಸ್ಟ್ಯಾಂಡ್, ಪ್ರಮುಖವಾಗಿ ಅಂಬೆಡ್ಕರ್ ಭವನ, ಸರಿಯಾದ ರಸ್ತೆ ಗಳಿಲ್ಲದೆ ಈ ಎಲ್ಲಾ ಗಂಭೀರ ಸಮಸ್ಯೆಗಳಿಂದಾಗಿ ನಕ್ಸಲರು ಪ್ರವೇಶ ಮಾಡುತ್ತಾರೆ ಎಂಬ ಗುಮಾನಿ ಇದೆ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಕ್ಸಲ್ ಪ್ಯಾಕೇಜ್ ಸೂಕ್ತ ರೀತಿಯಲ್ಲಿ ಬಳಕೆಯಾದಲ್ಲಿ ಈ ಭಾಗದ ಜನರು ಅಭಿವೃದ್ಧಿಯಾಗುವುದರೊಂದಿಗೆ ಸಮಸ್ಯೆಗಳು ನಿವಾರಣೆಯಾಗಬಹುದು. ಆ ಮೂಲಕ ಈ ಭಾಗದಲ್ಲಿ ಯಾವುದೇ ಕ್ರಾಂತಿ ಚಳುವಳಿ ನೆಲೆಯೂರಲು ಆಸಾಧ್ಯವಾಗುತ್ತದೆ. ಈ ಬಗ್ಗೆ ಎಎನ್ಎಫ್ ಅಧಿಕಾರಿಗಳಾದ ತಾವು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸ್ಪಂದಿಸಬೇಕಾಗಿ ಆಗ್ರಹಿಸುತ್ತೇವೆ ಎಂದರು.

ದಲಿತರೇ ಬಳಸಿಕೊಳ್ಳಬೇಕಾದ ದಲಿತರ ಸೌಲಭ್ಯಕ್ಕಾಗಿ ಇರುವಂತಹ ಕಾಡುತ್ಪತಿಯನ್ನು ಅರಣ್ಯ ಇಲಾಖೆಯವರು ದಲಿತರಿಗೆ ಪಡೆಯಲು ಅವಕಾಶ ನೀಡಬೇಕು. ಏಲಂ ಕೂಡ ಸರಕಾರ ನಿಲ್ಲಿಸಿದ್ದು, ಕಾಡುತ್ಪತ್ತಿಯನ್ನು ದಲಿತರೇ ಪಡೆದುಕೊಳ್ಳುಲು ಅವಕಾಶ ಇದೆ, ಆದ್ದರಿಂದ ಕಾಡುತ್ಪತ್ತಿ ಸಂಗ್ರಹಿಸುವ ದಲಿತರಿಗೆ ಅರಣ್ಯ ಇಲಾಖೆಯವರಿಂದ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ತೊಂದರೆ ಮಾಡುವ ಅಧಿಕಾರಿ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಗ್ರಾಮಸ್ಥರು ಹೇಳಿದರು, ಅದೇ ರೀತಿ ಗ್ರಾಮದಲ್ಲಿ ಅಲ್ಲಲ್ಲಿ ಸಾರಾಯಿ ಮಾರಾಟ ಮಾಡುವ ಧಂದೆಯು ಎಗ್ಗಿಲ್ಲದಂತೆ ನಡೆಯುತ್ತಿದ್ದು ಯಾರಾದರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ ಪೊಲೀಸರೇ ನೇರವಾಗಿ ಮಾಹಿತಿದಾರರ ಹೆಸರನ್ನು ಮಾರಾಟಗಾರರಿಗೆ ತಿಳಿಸುವುದಲ್ಲದೇ, ಕೂಡಲೇ ತಪ್ಪಿಸುವಂತೆ ಸಹಕಸುತ್ತಾರೆ ಎಂದು ಮಹಿಳೆಯರು ದೂರಿದರು. ಗ್ರಾಮದ ಪ್ರಮುಖ ಸಮಸ್ಯೆಗಳಾದ ರಸ್ತೆ ಸಮಸ್ಯೆ, ನೀರಿನ ಸಮಸ್ಯೆ, ಬೀದಿ ದೀಪ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಹಕರಿಸುವಂತೆ ಆಗ್ರಹಿಸಿದ್ದಲ್ಲದೇ ಪೇರಮಜಲು ಮೋಂಟರವರ ಜಾಗದಲ್ಲಿ ಹಾದು ಹೋಗುವ ವಿದ್ಯುತ್ ಲೈನ್ನ್ನು ಬದಲಿಸಿ ಕೊಡಬೇಕಾಗಿ ಕೇಳಿಕೊಂಡರು. ಪೇರಮಜಲಿನಲ್ಲಿ ಶ್ಮಶಾನಕ್ಕೆ ಅತೀ ಅಗತ್ಯವಾಗಿ ಜಾಗ ಕಾದಿರಿಸುವಂತೆ ಕೇಳಿಕೊಂಡರಲ್ಲದೇ, ಬಿಎಸ್ಎನ್ಎಲ್ ಟವರಿನ ಸಮಸ್ಯೆ ಇದ್ದು ಟವರ್ ನಿರ್ಮಿಸುವಂತೆ ಆಗ್ರಹಿಸಲಾಯಿತು. ಅಡ್ಡಹೊಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆಗೆ ಹಾಸಿದ ಜಲ್ಲಿ ರಾಶಿಯಿಂದ ಶಾಲಾ ಮಕ್ಕಳಿಗೆ ಸಮಸ್ಯೆಯಾಗುತ್ತಿದ್ದು ಅದಕ್ಕೆ ಸರಿಯಾದ ನೀರು ಕೂಡ ಹಾಯಿಸುವುದಿಲ್ಲ. ಇದಕ್ಕೆ ಸಂಬಂಧಪಟ್ಟವರಿಗೆ ತಿಳಿಸಬೇಕಾಗಿ ಆಗ್ರಹಿಸಿದರು. ಸಮಸ್ಯೆಗಳ ಬಗ್ಗೆ ಉತ್ತರಿಸಿದ ಎಸೈ ಅನಿಲ್ ರಾಥೋಡ್ರವರು ಇಲ್ಲಿಯ ಸಮಸ್ಯೆಗಳನ್ನು ಸಂಬಂದಪಟ್ಟ ಇಲಾಖಾವಾರು ಅಧಿಕಾರಿಗಳಲ್ಲಿ ಹಾಗೂ ಪಂ.ಅಭಿವೃದ್ಧಿ ಅಧಿಕಾರಿಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು. ಅಲ್ಲದೆ ಮುಂದಿನ ಸಭೆಯಲ್ಲಿ ಹೆಚ್ಚಿನ ಎಲ್ಲಾ ಇಲಾಖಾಧಿಕಾರಿಗಳು ಭಾಗವಹಿಸಿ ಸಮಸ್ಯೆಗೆ ಪರಿಹಾರ ದೊರೆಯುವಂತೆ ಎಲ್ಲರು ಪ್ರಯತ್ನಿಸೋಣ ಎಂದರು. ವೇದಿಕೆಯಲ್ಲಿ ಡಿಎಸ್ಎಸ್ ಮುಖಂಡ ಗಣೇಶ್ ಕಾಯರಡ್ಕ, ಎಎನ್ಎಫ್ ಕಾನ್ಸ್ಟೇಬಲ್ಗಳಾದ ವಿರೇಶ್ ನಾಯಕ್, ಕುಮಾರ್, ಕೆಸರೂರು, ಉಪಸ್ಥಿತರಿದ್ದರು.

ರಮೇಶ್ ಪೆರಮಜಲು, ವಾಸು, ಸಂಜಿವ, ಎಲ್ಯಣ್ಣ. ಗುರುನಾಥ್, ದಿನೇಶ್, ಕಾವ್ಯ, ಸುನಂದ, ಸವಿತಾ, ಸುಶೀಲ, ಬಾಬಿ, ಪ್ರವೀಣ್, ಸುದೀಪ್, ಚಿನ್ನಪ್ಪ, ಕೊರಗಪ್ಪ, ಮುದರ, ನಾಗಮ್ಮ, ರೂಪ, ಪ್ರೇಮ, ಸುಂದರಿ, ಲೀಲಾ, ಶಶಿಧರ, ರಮೇಶ, ಕರಿಯ, ವಿಜಯ, ಅಕ್ಷಯ, ಸ್ವಾತಿಕ್. ವಿಠಲ, ತನಿಯಪ್ಪ, ಕೃಷ್ಣ, ದಯ್ಯು, ದಿನೇಶ್, ಹರೀಶ್, ಪ್ರಭಾಕರ, ದೇವಪ್ಪ,ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು. ಕಾರ್ತಿಕ್ ಕೆ. ಸ್ವಾಗತಿಸಿ, ಲೀಲಾ ಪೇರಮಜಲು ವಂದಿಸಿದರು.

 

error: Content is protected !!

Join the Group

Join WhatsApp Group