ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಮಾ.28. ಇಂದಿನ ವಿದ್ಯಾರ್ಥಿಗಳೇ ನಮ್ಮ ದೇಶವನ್ನಾಳುವ ಮುಂದಿನ ಜನಾಂಗದವರಾಗಿದ್ದು, ತಮ್ಮ ಮುಂದಿನ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ತಮ್ಮ ಮೇಲೆ ತಾವು ಆತ್ಮ ವಿಶ್ವಾಸವನ್ನು ಇಟ್ಟುಕೊಂಡು ದೃಢ ನಿರ್ಧಾರದಿಂದ ಕಾರ್ಯವನ್ನು ಕೈಗೊಂಡಾಗ ಮಾತ್ರ ಸಾಧ್ಯ. ಅದರಂತೆಯೇ ಅಹಂಕಾರವನ್ನು ತ್ಯಜಿಸಿ ವಿನಯವನ್ನು ತಮ್ಮದಾಗಿಸಿಕೊಂಡಾಗ ಭವಿಷ್ಯವು ಉಜ್ವಲವಾಗುತ್ತದೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ, ಬಂಟ್ವಾಳ ಎಸ್.ವಿ.ಎಸ್ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ತುಕಾರಾಮ್ ಪೂಜಾರಿ ಹೇಳಿದರು. ಅವರು ಸವಣೂರು ಮಾ.28ರಂದು ನಡೆದ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ .ಕೆ. ಸೀತಾರಾಮ ರೈ ಸವಣೂರು ಅವರು ಮಾತನಾಡಿ, ವಾರ್ಷಿಕೋತ್ಸವವು ಸಂಸ್ಥೆಗೆ ಹಬ್ಬವಿದ್ದಂತೆ ವಿದ್ಯಾರ್ಥಿಗಳ ಒಂದು ವರ್ಷದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಾಧನೆಗಳನ್ನು ಗುರುತಿಸುವಂತಹ ದಿನವಿದು ಎಂದರು. ಬೆಳ್ಳಾರೆ ಅರಕ್ಷಕ ಠಾಣೆಯ ಉಪನಿರೀಕ್ಷಕ ಈರಯ್ಯ ಡಿ.ಎನ್ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಅತೀ ಮುಖ್ಯವಾದದ್ದು ಎನ್ನುವುದರ ಜೊತೆಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವ ಕುರಿತು ವಿವರಿಸಿದರು.

ಕಾರ್ಯಕ್ರಮವು ಮಮತಾ ಮತ್ತು ಬಳಗದವರ ಆಶಯಗೀತೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರನ್ನು ಪ್ರಥಮ ಬಿ.ಎ ವಿದ್ಯಾರ್ಥಿಯಾದ ಸುಧಾಕರ್ ಸ್ವಾಗತಿಸಿ ಪ್ರಥಮ ಬಿ.ಕಾಂ ನ ವಿದ್ಯಾರ್ಥಿಯಾದ ನೀರಜ್ ವಂದಿಸಿದರು. ಅತಿಥಿಗಳ ಪರಿಚಯವನ್ನು ದ್ವಿತೀಯ ಬಿ.ಎ ವಿದ್ಯಾರ್ಥಿನಿಯಾದ ಶಾಕಿರಾ ನಿರ್ವಹಿಸಿದರು. ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಗಳಾದ ಎನ್. ಸುಂದರ ರೈ , ವಿದ್ಯಾರ್ಥಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ. ಬಾಲಕೃಷ್ಣ ರೈ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾದ ಅಶ್ವಿನ್ ಎಲ್ ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳಾದ ರಫೀನಾ ಮತ್ತು ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group