ಸುಳ್ಶ ಶಾಸಕರನ್ನು ಅಭಿನಂದಿಸಿದ ಕುದಲೂರು ಮುಸ್ಲಿಮ್ ಮುಖಂಡರು

(ನ್ಯೂಸ್ ಕಡಬ) newskadaba.com ಮಾ.20. ಕುದುಲೂರಿಗೆ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಡಯಲ್ಲಿ ರಸ್ತೆ ಕಾಂಕ್ರೀಟೀಕರಣಗೊಳಿಸಿ ಸಹಕರಿಸಿದ ಸುಳ್ಯ ಶಾಸಕ ಎಸ್.ಅಂಗಾರ ಅವರನ್ನು ಸ್ಥಳೀಯ ಅಲ್ಪಸಂಖ್ಯಾತ ಮುಖಂಡರು ಭಾನುವಾರ ರಸ್ತೆ ಉದ್ಘಾಟನೆ ಬಳಿಕ ಅಭಿನಂದಿಸಿದರು.

ಸ್ಥಳೀಯ ಧರ್ಮಗುರು ಅಬೂಬಕ್ಕರ್ ಹಾಜಿ, ಇಬ್ರಾಹಿಂ ಹಾಜಿ ಸೇರಿದಂತೆ, ಐದಾರು ಮುಸ್ಲಿಮ್ ಮುಖಂಡರುಗಳು ಶಾಸಕರನ್ನು ಹಾರ ಹಾಕಿ ಗೌರವಿಸಿ ಅಭಿನಂದಿಸಿದರು. ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮುಸ್ಲಿಮ್ ಮುಖಂಡರು ಹತ್ತಿರದಲ್ಲೇ ಇರುವ ಅಬೂಬಕ್ಕರ್ ಅವರ ಮನೆಗೆ ಆಹ್ವಾನಿಸಿ ಲಘು ಪಾನೀಯ ನೀಡಿ ಉಪಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ತಾನು ಶಾಸಕನಾದ ಮೇಲೆ ಎಲ್ಲಾ ವರ್ಗದ ಜನ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಇದನ್ನು ಗುರುತಿಸಿ ಕ್ಷೇತ್ರದ ಮತದಾರರು ನನ್ನನ್ನು ನಿರಂತರವಾಗಿ ಗೆಲ್ಲಿಸಿ ಕ್ಷೇತ್ರದ ಸೇವೆ ಮಾಡಲು ಅವಕಾಶ ನೀಡುತ್ತಿದ್ದಾರೆ. ಇದೀಗ ಸುಳ್ಯ ಕ್ಷೇತ್ರದಲ್ಲಿ ಹೆಚ್ಚು  ಮುಸ್ಲಿಮ್ ಬಂಧುಗಳು ಬಿಜೆಪಿಯ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಬರುತ್ತಿದ್ದಾರೆ. ಮಾತ್ರವಲ್ಲದೆ ಸಕ್ರೀಯವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಶಾಸಕರೊಂದಿಗೆ ಸುಳ್ಯ ಮಂಡಲದ ಅಲ್ಪ ಸಂಖ್ಯಾತ ಮೋರ್ಚಾದಾ ಅಧ್ಯಕ್ಷ ಅಶ್ರಫ್ ಖಾಸಿಲೆ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಆತೂರು, ನೆಲ್ಯಾಡಿ ಶಕ್ತಿಕೇಂದ್ರ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಸೇರಿದಂತೆ ಬಿಜೆಪಿ ಜನಪ್ರನಿಧಿಗಳು ಮುಖಂಡರು ಉಪಸ್ಥಿತರಿದ್ದರು.

error: Content is protected !!
Scroll to Top